ಹರಪನಹಳ್ಳಿ : ಶಾಸಕಿಯಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರ ಋಣ ತೀರಿಸಲು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಭಾನುವಾರ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿದರು.ಚಿಗಟೇರಿ ಹೋಬಳಿ ನಮ್ಮ ಕುಟುಂಬಕ್ಕೆ ತವರು ಮನೆ ಇದ್ದಂತಿದೆ. ಈ ಭಾಗದ ಜನರ ಜೊತೆ 1975ರಿಂದ ಒಡನಾಟವಿದೆ ಎಂದು ಹೇಳಿದರು. ಹಡಗಲಿಯಿಂದ ನಮ್ಮತಂದೆ ಎಂ.ಪಿ.ಪ್ರಕಾಶ್ ಸ್ಪರ್ಧಿಸಿದಾಗ, ಚಿಗಟೇರಿ ಹೋಬಳಿ ಮತದಾರರು ಗೆಲ್ಲಿಸಿ ಕಳಿಸುತ್ತಿದ್ದರು. ಅಂದು ಅಪ್ಪಾಜಿ ಅವರ ಮೇಲೆ ಜನರು ಇಟ್ಟಿದ್ದ ಪ್ರೀತಿ ವಿಶ್ಚಾಸವೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಿದೆ ಎಂದರು.
ನನ್ನ ಸಹೋದರ ಎಂಪಿ.ರವೀಂದ್ರ ಅಂದಾಜು 3 ಸಾವಿರ ಕೋಟಿ ತಂದು ಕೆಲಸ ಮಾಡಿದ್ದರು. 371ಜೆ ಸೌಲಭ್ಯ ಕಲ್ಪಿಸಿದ ಪ್ರತಿಫಲವಾಗಿ ಇಂದು ಹೆಚ್ಚಿನ ಅನುದಾನ ಸಿಗುತ್ತಿದೆ ಎಂದು ತಿಳಿಸಿದರು.
₹ 80 ಲಕ್ಷ ವೆಚ್ಚದಲ್ಲಿ ಕಂಚಿಕೇರಿ ಗ್ರಾಮದಿಂದ ಚೌಡಾಪುರ ಕ್ರಾಸ್ ವರೆಗೆ ರಸ್ತೆ, ₹ 1.50 ಕೋಟಿ ವೆಚ್ಚದಲ್ಲಿ ಮತ್ತೂರು ಮಾರ್ಗದಿಂದ ಜಿಲ್ಲಾ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ₹ 3.50 ಕೋಟಿ ವೆಚ್ಚದಲ್ಲಿ ಮೈದೂರಿನಿಂದ ಗೌರಿಪುರಕ್ಕೆ ರಸ್ತೆ, ₹ 1.20 ಕೋಟಿ ವೆಚ್ಚದಲ್ಲಿ ಮೈದೂರಿನಿಂದ ತಾಲ್ಲೂಕು ಗಡಿವರೆಗಿನ ರಸ್ತೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದರು. ಎಇಇ ಕುಬೇಂದ್ರನಾಯ್ಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.
Leave a comment