ಅಜ್ಜವ್ವರ ಸುದೀಪ
ಹರಪನಹಳ್ಳಿ : ಛಲವಿದ್ದರೆ ಸಾಧನೆಗೆ ಯಾವುದೇ ಅಡ್ಡಿಯಿಲ್ಲ ಎಂಬುದನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಸಾಗರ್ ಕೆ.ಸಿ. ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ನೀಟ್ (NEET) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸುವ ಮೂಲಕ, ಪುದುಚೇರಿಯ ಜಿಪ್ಮರ್ (JIPMER) ಸಂಸ್ಥೆಯಲ್ಲಿ ಎಂಬಿಬಿಎಸ್ (MBBS) ಪ್ರವೇಶ ಗಿಟ್ಟಿಸಿಕೊಂಡು ತಮ್ಮ ಗ್ರಾಮಕ್ಕೆ ಅಪಾರ ಕೀರ್ತಿ ತಂದಿದ್ದಾರೆ.
ಸಾಗರ್ ಅವರು ಈ ಸಾಲಿನ ನೀಟ್ (NEET) ಪರೀಕ್ಷೆಯಲ್ಲಿ ಆಲ್ ಇಂಡಿಯಾ ಎಸ್ಟಿ (ST) ವಿಭಾಗದಲ್ಲಿ 96ನೇ ರ್ಯಾಂಕ್ ಪಡೆದು ಬೀಗಿದ್ದಾರೆ. ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿರುವ ಪುದುಚೇರಿಯ ಜಿಪ್ಮರ್ನಲ್ಲಿ (JIPMER) ಎಂಬಿಬಿಎಸ್ ಸೀಟು ಪಡೆದಿದ್ದಾರೆ. ಕಣಿವಿಹಳ್ಳಿ ಗ್ರಾಮದಿಂದ ಎಂಬಿಬಿಎಸ್ ಸೀಟು ಪಡೆದ ಮೊಟ್ಟಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಸಾಗರ್ ಪಾತ್ರರಾಗಿದ್ದಾರೆ.
ಗ್ರಾಮದ ಶ್ರೀಮತಿ ಲಕ್ಷ್ಮಿ ಹಾಗೂ ಶ್ರೀ ಚಂದ್ರಶೇಖರ್ ದಂಪತಿಯ ಪುತ್ರನಾಗಿರುವ ಕುಮಾರ್ ಸಾಗರ್ ಕೇವಲ ವೈದ್ಯಕೀಯ ಮಾತ್ರವಲ್ಲ, ಎಂಜಿನಿಯರಿಂಗ್ ಕ್ಷೇತ್ರದಲ್ಲೂ ತಮ್ಮ ಬುದ್ಧಿಮತ್ತೆ ಮೆರೆದಿದ್ದರು. ಇದಕ್ಕೂ ಮೊದಲು ನಡೆದಿದ್ದ ಕಠಿಣ ‘ಜೆಇಇ ಅಡ್ವಾನ್ಸ್ಡ್’ (JEE Advanced) ಪರೀಕ್ಷೆಯಲ್ಲೂ ಆಲ್ ಇಂಡಿಯಾ ಮಟ್ಟದಲ್ಲಿ 367ನೇ ಸ್ಥಾನ ಪಡೆದು, ಪ್ರತಿಷ್ಠಿತ ಐಐಟಿ ಮದ್ರಾಸ್ಗೆ (IIT Madras) ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. “ಪ್ರತಿಭಾನ್ವಿತ ಸಾಗರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ, ಸಮಾಜಕ್ಕೆ ಸೇವೆ ಸಲ್ಲಿಸುವ ಅತ್ಯುತ್ತಮ ವೈದ್ಯರಾಗಿ ಹೊರಹೊಮ್ಮಲಿ” ಎಂದು ಕಣಿವಿಹಳ್ಳಿ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.
Leave a comment