ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ 2026-31ನೇ ಸಾಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (KSPSTA) ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳ ಚುನಾವಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಚುನಾವಣಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಜ್ಯ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪರಿಷ್ಕೃತ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಶಿಕ್ಷಕ ವಲಯದಲ್ಲಿ ಸಂಚಲನ ಮೂಡಿಸಿದೆ.

ನ್ಯಾಯಾಲಯದ ಮಧ್ಯಂತರ ಆದೇಶ:
ಗೌರವಾನ್ವಿತ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು (OS No: 3179/2026 ರ ಮಧ್ಯಂತರ ಅರ್ಜಿ ನಂ: 3) ದಿನಾಂಕ 02.05.2026 ರಂದು ನೀಡಿರುವ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮೇ 4 ರಂದು ಮಧ್ಯಾಹ್ನ 3.40ಕ್ಕೆ ನ್ಯಾಯಾಲಯದ ಆದೇಶದ ಪ್ರತಿ ಸ್ವೀಕೃತವಾಗಿದ್ದು, ಇದರನ್ವಯ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗಳ ಚುನಾವಣೆ ನಡೆಸುವುವಿಕೆಗೆ ತಡೆ ಬಿದ್ದಿದೆ.
ಈ ಹಿಂದೆ ಏಪ್ರಿಲ್ 28 ಮತ್ತು ಮೇ 1 ರಂದು ಹೊರಡಿಸಲಾಗಿದ್ದ ಎಲ್ಲಾ ಚುನಾವಣಾ ಆದೇಶಗಳು ಮತ್ತು ಸುತ್ತೋಲೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಡೆ ನೀಡಲಾಗಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೂ ಯಥಾಸ್ಥಿತಿಯನ್ನು (Status Quo) ಕಾಪಾಡಲು ರಾಜ್ಯ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
:ದಾಖಲೆಗಳ ಭದ್ರತೆಗೆ ಕಟ್ಟುನಿಟ್ಟಿನ ಆದೇಶ:
ಚುನಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಇದುವರೆಗಿನ ಎಲ್ಲಾ ಚುನಾವಣಾ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಾಮಪತ್ರಗಳು, ಸ್ವೀಕರಿಸಲಾದ ಅಂಚೆ ಮತಪತ್ರಗಳು ಸೇರಿದಂತೆ ಎಲ್ಲಾ ಮಹತ್ವದ ದಾಖಲೆಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ (Sealed Cover) ಇಟ್ಟು, ಸೂಕ್ತ ರಕ್ಷಣೆಯಲ್ಲಿಡುವಂತೆ ಎಲ್ಲಾ ಹಂತದ ಚುನಾವಣಾಧಿಕಾರಿಗಳಿಗೆ ರಾಜ್ಯ ಚುನಾವಣಾಧಿಕಾರಿ ಮೆಹಬೂಬ್ ಪಾಷಾ ಮೂಲಿಮನಿ ಅವರು ಮೇ 5 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
Leave a comment