ಹರಪನಹಳ್ಳಿ: ದೇಶದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಆಗಿರುವುದಕ್ಕೆ ಯುದ್ದ ಕಾರಣ ಹೊರತು ಕೇಂದ್ರ ಸರ್ಕಾರವಲ್ಲ. ಬೇರೆ ದೇಶಗಳಲ್ಲಿ ಅಡುಗೆ ಅನಿಲವೇ ಸಿಗುತ್ತಿಲ್ಲ, ಆದರೆ ಪ್ರಧಾನಿ ಮೋದಿಜಿ ಅವರು ನಮ್ಮ ದೇಶದಲ್ಲಿ ಸಿಲಿಂಡರ್ ಕೊರತೆಯಾಗದಂತೆ ಕಾಳಜಿವಹಿಸಿದ್ದಾರೆ ಎಂದು ಸಂಯುಕ್ತ ಸಹಕಾರಿ ಸೌಹಾರ್ದ ಬ್ಯಾಂಕ್ ರಾಜ್ಯಾಧ್ಯಕ್ಷ ಜಿ.ನಂಜನಗೌಡ ತಿಳಿಸಿದರು.
ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಸಲ್ಲದ ಅಪಪ್ರಚಾರ ಮಾಡುತ್ತಿದೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.
ಮೇ 9ರಂದು ಚಿತ್ರದುರ್ಗ ನಗರದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಹರಪನಹಳ್ಳಿಯಿಂದ 10 ಸಾವಿರ ಕಾರ್ಯಕರ್ತರನ್ನು ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಸೇರಿಕೊಂಡಿರುವ ವಿದೇಶಿಗರು ಕೆಟ್ಟ ಪರಂಪರೆ ಹುಟ್ಟು ಹಾಕುತ್ತಿದ್ದಾರೆ. ಅಂತಹ ವಲಸಿಗರನ್ನು ಗುರುತಿಸಿ ದೇಶದಿಂದ ಹೊರ ಹಾಕುವ ಅಗತ್ಯವಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಹೋರಾಟದಿಂದ ಬೆಳೆದು ಈ ರಾಜ್ಯದ ಮುಖ್ಯಮಂತ್ರಿ ಆದವರು. ಅವರ ಚಳವಳಿ ನಮ್ಮ ಕಾರ್ಯಕರ್ತರಿಗೆ, ಯುವಕರಿಗೆ ಪ್ರೇರಣೆಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಸೃಷ್ಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಅಂತಹ ಮುತ್ಸದ್ದಿಯು ರಾಜಕಾರಣದಲ್ಲಿ ಸಲ್ಲಿಸಿದ ಸೇವೆ ಸ್ಮರಿಸಲು ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಂಜನಾಯ್ಕ ಮಾತನಾಡಿ, ಎಫ್ಐಡಿ (FID) ಇರುವ ರೈತರಿಗೆ ಮಾತ್ರ ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ನೀಡುವ ಆದೇಶ ಹಿಂಪಡೆಯಬೇಕು. ಎಲ್ಲ ರೈತರಿಗೆ ಪ್ರತಿ ಎಕರೆಗೆ 4 ಚೀಲ ಯೂರಿಯಾ ಗೊಬ್ಬರ ವಿತರಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಎಂ.ಪಿ.ನಾಯ್ಕ, ಮುತ್ತಿಗಿ ವಾಗೀಶ, ಕಣಿವಿಹಳ್ಳಿ ಮಂಜುನಾಥ, ಚೆನ್ನನಗೌಡ, ಮೈದೂರು ಮಲ್ಲಿಕಾರ್ಜುನ, ಪಕ್ಕೀರನಾಯ್ಕ, ನಿಟ್ಟೂರು ಸಣ್ಣಹಾಲಪ್ಪ, ಚಾರೆಪ್ಪ, ರಮೇಶ್ ಮತ್ತಿತರರಿದ್ದರು.
Leave a comment