ಹರಪನಹಳ್ಳಿ : ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ರಾತ್ರಿ ಶಿವಶರಣ ಹರಳಯ್ಯ ನಾಟಕವನ್ನು ಸಿರಿಗೇರಿ ಧಾತ್ರಿ ರಂಗಸಂಸ್ಥೆ ಕಲಾವಿದರು ಉಚಿತವಾಗಿ ಪ್ರದರ್ಶಿಸಿ ಸಮಾನತೆ ಸಂದೇಶ ಸಾರಿದರು.
ನಾಟಕಕ್ಕೆ ಚಾಲನೆ ನೀಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ ಮಾತನಾಡಿ, ನಿತ್ಯ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಮನರಂಜನೆಯ ಉದ್ದೇಶದಿಂದ ನಾಟಕ ಹಮ್ಮಿಕೊಳ್ಳಲಾಗಿದೆ. ಇದೇರೀತಿ ನಿರಂತರವಾಗಿ ಸರ್ಕಾರಿ ನೌಕರರ ಸಂಘ ಸಮಾಜಮುಖಿ ಕಾರ್ಯಕ್ರಮ ರೂಪಿಸುತ್ತದೆ ಎಂದರು.
ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಶರೀಫ್ ಮಾತನಾಡಿ, ರಂಗಭೂಮಿ ಕಲೆ ಉಳಿಸಿ ಬೆಳೆಸಬೇಕಾಗಿದೆ. ಶಿವಶರಣ ಹರಳಯ್ಯ ನಾಟಕ ನಮ್ಮೆಲ್ಲರ ಬದುಕಿಗೆ ಸ್ಪೂರ್ತಿ ನೀಡಿತು ಎಂದು ತಿಳಿಸಿದರು. ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ತೌಡೂರು ಗುರುಮೂರ್ತಿ ಮಾತನಾಡಿ, ವಚನಕಾರ ಹರಳಯ್ಯ ಕುರಿತು ಇತಿಹಾಸದಲ್ಲಿ ದಾಖಲಾಗಿದ್ದ ಕಥೆ ತೆರೆಯ ಮೇಲೆ ನೋಡಿ ಮೈ ಜುಮ್ಮೆನಿಸುತ್ತದೆ. ಅವರ ಶ್ರೇಷ್ಠ ಭಕ್ತಿ ಬಸವಣ್ಣನನ್ನು ಮೆಚ್ಚಿಸಿದ ಬಗೆ ಮಾದರಿಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಸಮಾಜದ ಜಾತಿ ವ್ಯವಸ್ಥೆ ಯಲ್ಲಿ ಅಸ್ಪೃಶ್ಯರಾಗಿದ್ದ ಹರಳಯ್ಯ ಕುಟುಂಬಕ್ಕೆ ಬಸವೇಶ್ವರರು ಲಿಂಗಧಾರಣೆ ಮಾಡಿ, ಹರಳಯ್ಯ ಮತ್ತು ಮಧುವರಸನ ಮಗನಿಗೆ ಮದುವೆ ಮಾಡಿಸಿದ್ದು ಹಾಗೂ ಹರಳಯ್ಯ ಮತ್ತು ಕಲ್ಯಾಣಮ್ಮ ತಮ್ಮ ತೊಡೆ ಚರ್ಮದಿಂದ ಪಾದರಕ್ಷೆ ತಯಾರಿಸಿದ ಭಕ್ತಿ ಪರಾಕಾಷ್ಠೆ ಪ್ರೇಕ್ಷಕರನ್ನು ಮಂತ್ರ ಮುಗ್ಧವಾಗಿಸಿತು.

ಶಿವಶರಣ ಹರಳಯ್ಯ, ಬಿಜ್ಜಳ ಹಡಪದ ಅಪ್ಪಣ್ಣ ಪಾತ್ರಗಳಲ್ಲಿ ವಿಜಯ್ ಕುಮಾರ್ ಸಿರಿಗೇರಿ , ಶೀಲವಮಯ. ಕೊಂಡಿ ಮಂಚಣ್ಣ ಪಾತ್ರಧಾರಿ ವಾಸು ಕುಣಿಗಲ್, ಪಂಡಿತರಾಗಿ ಮಾದಿಹಳ್ಳಿ ಸುಮಂಗಲ, ಕಲ್ಯಾಣಮ್ಮಳಾಗಿ ರಾಯಚೂರು ಸುಮಿತ್ರಾ, ಬಸವೇಶ್ವರನಾಗಿ ಕುಣಿಗಲ್ ದರ್ಶನ್, ಶವಲಿಂಗಿಯಾಗಿ ಕಿರಣ್ಕುಮಾರ, ಮಧುವರಸನ ಪಾತ್ರದಲ್ಲಿ ಆದಿಶೇಷ, ಅಲ್ಲಮ ಪ್ರಭುವಾಗಿ ಬಿ.ಜಿ.ಹನುಮಂತು, ನೀಲಾಂಬಿಕಯಾಗಿ ಬಳ್ಳಾರಿ ಶ್ರೀಲತಾ ಅವರು ಪಾತ್ರಗಳಿಗೆ ಜೀವತುಂಬಿ ಮನೋಜ್ಞ ವಾಗಿ ಅಭಿನಯಿಸಿದರು. ಬೆಳಕು ಮತ್ತು ಸಂಗೀತ ನಾಗರಾಜ ಸಿರಿಗೆರೆ ನಿರ್ವಹಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಅಂಜಿನಪ್ಪ, ಕಾರ್ಯದರ್ಶಿ ಸೂರ್ಯನಾಯ್ಕ, ಗುರುನಾಥ, ಬಸವರಾಜ್, ಟಿ.ಎಚ್.ಎಂ.ಲತಾ, ಪಿ.ಸುಬ್ಬಣ್ಣ, ವೀರಪ್ಪ, ಎಲ್.ಎಚ್.ಗಿರೀಶ್, ಜಮಾಲುದ್ದೀನ್, ಕರಿಬಸಪ್ಪ, ಮಕಬುಲ್ ಬಾಷ, ಸಂಗಯ್ಯ, ಶಶಿಕಲಾ ಡಿ, ಶೋಭಾ ರಾಣಿ ಇತರರಿದ್ದರು.
Leave a comment