ಹೊಸಪೇಟೆ (ವಿಜಯನಗರ): “ಮಕ್ಕಳು ಈ ದೇಶದ ಅಮೂಲ್ಯ ಆಸ್ತಿ. ಪೋಷಕರಿಗೆ ಬೇಡವಾದ ಅಥವಾ ಅನಾಥವಾಗಿ ಸಿಕ್ಕ ಮಕ್ಕಳನ್ನು ಎಲ್ಲೆಂದರಲ್ಲಿ ಬಿಟ್ಟು ಅವರ ಜೀವದ ಜೊತೆ ಚೆಲ್ಲಾಟವಾಡಬೇಡಿ. ಅಂತಹ ಮಕ್ಕಳನ್ನು ಸರ್ಕಾರದ ವಿಶೇಷ ದತ್ತು ಸಂಸ್ಥೆಗೆ ಹಸ್ತಾಂತರಿಸಿ, ಅವರ ಸುಭದ್ರ ಭವಿಷ್ಯಕ್ಕೆ ದಾರಿದೀಪವಾಗಿ,” ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಇಬ್ಬರು ಮಕ್ಕಳಿಗೆ ದತ್ತು ಪೂರ್ವ ಪೋಷಕತ್ವದ ಆದೇಶ ಪತ್ರ ವಿತರಿಸಿ ಮಾತನಾಡಿದರು. ವಿಜಯನಗರ ಜಿಲ್ಲೆಯಲ್ಲಿ 2024ರ ಅಕ್ಟೋಬರ್ನಿಂದ ಕಾರ್ಯಾರಂಭ ಮಾಡಿರುವ ಈ ದತ್ತು ಸಂಸ್ಥೆಯು, ಈವರೆಗೆ ಒಟ್ಟು 7 ಮಕ್ಕಳಿಗೆ ಕಾನೂನಾತ್ಮಕವಾಗಿ ಪೋಷಕರನ್ನು ಹುಡುಕಿಕೊಡುವ ಮೂಲಕ ಅವರ ಬದುಕಿಗೆ ಆಸರೆಯಾಗಿದೆ. ಕಾರಾ (CARA) ಮಾರ್ಗಸೂಚಿಯಂತೆ ಮಂಡ್ಯ ಹಾಗೂ ಹೊನ್ನಾವರದ ದಂಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಇಬ್ಬರು ಮಕ್ಕಳನ್ನು ದತ್ತು ಹಸ್ತಾಂತರಿಸಲಾಯಿತು.
“ಸಂಸ್ಥೆಯಲ್ಲಿರುವ ಮಕ್ಕಳ ಪಾಲನೆ ಮತ್ತು ಪೋಷಣೆಯನ್ನು ಸಿಬ್ಬಂದಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಎಲ್ಲಾದರೂ ಅನಾಥ ಅಥವಾ ಪರಿತ್ಯಕ್ತ ಮಕ್ಕಳು ಕಂಡುಬಂದಲ್ಲಿ ಕೂಡಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ. ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ಅವರಿಗೆ ಸುಂದರ ಬದುಕು ನೀಡಿ,” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಧೀಪ್ ಕುಮಾರ್ ಉಂಕಿ, ದತ್ತು ಕೇಂದ್ರದ ಸಿಬ್ಬಂದಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
Leave a comment