ಬೆಂಗಳೂರು : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಪ್ರಕ್ರಿಯೆಗೆ ನಗರದ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಮೇ 1ರಂದು ನಡೆಯಬೇಕಿದ್ದ ಚುನಾವಣೆಗೆ ಬ್ರೇಕ್ ಬಿದ್ದಂತಾಗಿದೆ.
ಸಂಘದ ಸದಸ್ಯರಾದ ಚಂದ್ರಶೇಖರ್ ಆರ್. ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ CCH28 14ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದ್ದು, ಇ ಕೋರ್ಟ್ ವೆಬ್ ಪುಟದಲ್ಲಿ ಪ್ರಕಟಿಸಿದ ಮಾಹಿತಿ ಇಲ್ಲಿದೆ.

ಪ್ರಕರಣದ ಹಿನ್ನೆಲೆ:
ಅರ್ಜಿದಾರರು ಸಂಘದ ಚುನಾವಣಾ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, 5ನೇ ಪ್ರತಿವಾದಿಗೆ (Defendant No. 5) ಮೇ 1, 2026 ರಂದು ನಿಗದಿಯಾಗಿದ್ದ ಚುನಾವಣೆಯನ್ನು ನಡೆಸದಂತೆ ‘ಎಕ್ಸ್ಪಾರ್ಟೆ’ (ಏಕಪಕ್ಷೀಯ) ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.
ನ್ಯಾಯಾಲಯದ ಆದೇಶದ ಮುಖ್ಯಾಂಶಗಳು:
ಚುನಾವಣೆಗೆ ತಡೆ: ಮುಂದಿನ ವಿಚಾರಣೆಯವರೆಗೆ ಸಂಘದ ಯಾವುದೇ ಚುನಾವಣಾ ಪ್ರಕ್ರಿಯೆಯನ್ನು ನಡೆಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಿವಿಲ್ ಪ್ರಕ್ರಿಯಾ ಸಂಹಿತೆ (CPC) ಯ ಆರ್ಡರ್ XXXIX ರೂಲ್ 3(A) ಅನ್ವಯ ಪಾಲನೆಯಾದ ನಂತರವೇ ಈ ತಡೆಯಾಜ್ಞೆಯ ಆದೇಶ ಜಾರಿಗೆ ಬರಲಿದೆ ಎಂದು ಕಚೇರಿಗೆ ಸೂಚಿಸಲಾಗಿದೆ.
ನೋಟಿಸ್ ಜಾರಿ: ಅರ್ಜಿಯಲ್ಲಿನ ಪ್ರತಿವಾದಿಗಳಿಗೆ ನ್ಯಾಯಾಲಯವು ಸಮನ್ಸ್ ಮತ್ತು ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 29, 2026ಕ್ಕೆ ಮುಂದೂಡಿದೆ. ಈ ಆದೇಶದಿಂದಾಗಿ ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಕಣ ಸದ್ಯಕ್ಕೆ ತಣ್ಣಗಾಗಿದ್ದು, ಜೂನ್ ಅಂತ್ಯದವರೆಗೆ ಯಾವುದೇ ಚಟುವಟಿಕೆಗಳು ನಡೆಯುವಂತಿಲ್ಲ.
Leave a comment