ಹರಪನಹಳ್ಳಿ: ನಗರದ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶುಕ್ರವಾರ ನಡೆದ ‘ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ’ದ ಚುನಾವಣೆಯು ಭಾರೀ ಹೈಡ್ರಾಮಾ ಮತ್ತು ಚುನಾವಣೆ ಬಹಿಷ್ಕಾರಕ್ಕೆ ಸಾಕ್ಷಿಯಾಯಿತು.
ನ್ಯಾಯಾಲಯದ ತಡೆಯಾಜ್ಞೆ (Stay Order) ಆದೇಶವಿದ್ದರೂ ಚುನಾವಣಾಧಿಕಾರಿಗಳು ಏಕಾಏಕಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಒಂದು ಬಣ ಚುನಾವಣೆಯನ್ನು ಬಹಿಷ್ಕರಿಸಿದರೆ, ಮತ್ತೊಂದು ಬಣ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.
ಬೆಳ್ಳಂಬೆಳಿಗ್ಗೆ ಶುರುವಾದ ಹೈಡ್ರಾಮಾ:
ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ‘ಗುರುಬಳಗ ವಿಚಾರವೇದಿಕೆ’ಯ 22 ಅಭ್ಯರ್ಥಿಗಳು ಬೆಳಿಗ್ಗೆ 8 ಗಂಟೆಗೇ ಚುನಾವಣಾ ಅಧಿಕಾರಿ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಪ್ರಿನ್ಸಿಪಲ್ ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಲಯವು ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಿದೆ ಎಂದು ಲಿಖಿತ ಮನವಿ ಸಲ್ಲಿಸಿದರು. ಆದರೆ, ಚುನಾವಣಾ ಅಧಿಕಾರಿ ಕೆ.ಸಿದ್ದಲಿಂಗನಗೌಡ ಅವರು ಇದನ್ನು ತಿರಸ್ಕರಿಸಿ ಮತದಾನ ಪ್ರಕ್ರಿಯೆ ಮುಂದುವರಿಸಿದರು.
ಕಣದಲ್ಲಿದ್ದವರು ಮತ್ತು ಮತದಾನದ ವಿವರ:
ಸಂಘದ ಒಟ್ಟು 22 ಸ್ಥಾನಗಳಿಗೆ (15 ಪುರುಷ ಹಾಗೂ 7 ಮಹಿಳಾ ನಿರ್ದೇಶಕರು) ಚುನಾವಣೆ ನಡೆಯಬೇಕಿತ್ತು. ಇದರಲ್ಲಿ 44 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಗುರುಬಳಗ ವಿಚಾರವೇದಿಕೆಯ ಅಭ್ಯರ್ಥಿಗಳು ನ್ಯಾಯಾಲಯದ ಆದೇಶ ಗೌರವಿಸಿ ಪ್ರಕ್ರಿಯೆಯಿಂದ ದೂರ ಉಳಿದರೆ, ಪ್ರಗತಿಪರ ಶಿಕ್ಷಕರ ಬಣವು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು. ಒಟ್ಟು 1,078 ಅರ್ಹ ಮತದಾರರ ಪೈಕಿ 741 ಶಿಕ್ಷಕರು ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ:
“ನ್ಯಾಯಾಲಯದ ಆದೇಶದ ಪ್ರತಿಯನ್ನು ಅಧಿಕಾರಿಗೆ ಸಲ್ಲಿಸಿದ್ದರೂ, ಉಲ್ಲಂಘನೆ ಮಾಡಿ ಕುತಂತ್ರದಿಂದ ಚುನಾವಣೆ ನಡೆಸಲಾಗುತ್ತಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಆದೇಶ ಉಲ್ಲಂಘನೆ (Contempt of Court) ಪ್ರಕರಣ ದಾಖಲಿಸಲಾಗುವುದು,” ಎಂದು ಗುರುಬಳಗ ವಿಚಾರವೇದಿಕೆ ಬಣದ ಅಭ್ಯರ್ಥಿಗಳು ತಿಳಿಸಿದರು.
ಚುನಾವಣಾ ಅಧಿಕಾರಿ ಸ್ಪಷ್ಟನೆ:
ಈ ಗೊಂದಲದ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಅಧಿಕಾರಿ ಕೆ.ಸಿದ್ದಲಿಂಗನಗೌಡ, “ರಾಜ್ಯ ಚುನಾವಣಾ ಆಯೋಗದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ನಿರ್ದೇಶನ ಬಂದಿಲ್ಲ. ಹೀಗಾಗಿ ನಿಗದಿಯಂತೆ ಮತದಾನ ಪ್ರಕ್ರಿಯೆ ಮುಂದುವರೆಸಲಾಗಿದೆ,” ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳಾದ ಬೋಜ್ಯನಾಯ್ಕ, ಚಿದಾನಂದಪ್ಪ, ಚೋಳಾನಾಯ್ಕ, ಕೆ.ಧರ್ಮನಾಯ್ಕ, ಜಯಶ್ರೀ, ಶೀಲಾ, ಮಂಜವ್ವ, ಗೋಣಿಬಸಪ್ಪ, ಕೆ.ಹನುಮಂತಪ್ಪ, ಜಗದೀಶ, ಕೆ.ಜಮಾಲುದ್ದಿನ್, ಶಿಲ್ಪಾ, ರತ್ನಿಬಾಯಿ, ಜಿ.ಕರಿಬಸಪ್ಪ, ಜಿ.ಕೊಟ್ರೇಶಪ್ಪ, ಕುಮಾರ, ಸಿ.ನಾಗಪ್ಪ, ಶೋಬಾಕುಮಾರಿ, ಸವಿತಾ, ರಿಜ್ವಾನ್ ಸಾಹೇಬ್, ಕೆ.ಎಂ.ಶ್ರೀಕಾಂತ, ಟಿ.ವಿಕ್ರಂ ಹಾಗೂ ಪ್ರಮುಖ ಶಿಕ್ಷಕರಾದ ಮಂಜುನಾಥ ಪೂಜಾರ, ಮಕರಬ್ಬಿ ಷರೀಪ್, ಸುಬ್ಬಣ್ಣ, ಬಸವರಾಜ್, ಸಂಗಯ್ಯ, ಟಿ.ಎಚ್.ಎಂ.ಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a comment