ಹರಪನಹಳ್ಳಿ: ಅನ್ಲೈನ್ನಲ್ಲಿ ನಿಯಮ ಬಾಹಿರವಾಗಿ ಔಷಧಿ ಮಾರಾಟ ಮಾಡುತ್ತಿರುವ ಇ-ಫಾರ್ಮಸಿ ಜಾಲದ ವಿರುದ್ಧ ದೇಶಾದ್ಯಂತ ಕರೆ ನೀಡಿರುವ ಔಷಧಿ ವ್ಯಾಪಾರ ಬಂದ್ ಬೆಂಬಲಿಸಿ ಹರಪನಹಳ್ಳಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘ ಬುಧವಾರ ಔಷಧ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿತು.
ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಕರೆ ನೀಡಿದ್ದ ದೇಶಾದ್ಯಂತ ಔಷಧಿ ವ್ಯಾಪಾರ ಬಂದ್ ಹೋರಾಟಕ್ಕೆ ತಾಲ್ಲೂಕು ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ಸೂಚಿಸಿದ ಔಷಧ ವ್ಯಾಪಾರಸ್ಥರು ತಾಲ್ಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷ ಎಸ್.ಎಚ್.ಎಂ.ರಾಜಶೇಖರಸ್ವಾಮಿ, ಆನ್ಲೈನ್ನಲ್ಲಿ ಕೇವಲ ಪ್ರಿಸ್ಕ್ರಿಪ್ಷನ್ ಫೋಟೋ ಕಳುಹಿಸಿ ಯಾವುದೇ ಕಟ್ಟುನಿಟ್ಟಿನ ಪರಿಶೀಲನೆ ಇಲ್ಲದೆ ಔಷಧಿಗಳನ್ನು ಮನೆಗೆ ತರಿಸಿಕೊಳ್ಳುತ್ತಾರೆ. ಇ-ಫಾರ್ಮಸಿ ವ್ಯವಹಾರಗಳು ದೇಶಾದ್ಯಂತ ಲಕ್ಷಾಂತರ ಸಾಂಪ್ರದಾಯಿಕ ಔಷಧಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿವೆ. ಆನ್ಲೈನ್ ಔಷಧಿ ಮಾರಾಟಕ್ಕೆ ನೀಡಿರುವ ಅವಕಾಶವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ದೇಶದ ಲಕ್ಷಾಂತರ ಸಾಂಪ್ರದಾಯಿಕ ಔಷಧಿ ವ್ಯಾಪಾರಿಗಳ ಹಿತರಕ್ಷಣೆ ಮಾಡಬೇಕು ಎಂದು ಆಗ್ರಹಸಿದರು.
ಔಷಧ ವ್ಯಾಪಾರಿಗಳಾದ ಬಿ.ಎಸ್.ರವಿಶಂಕರ, ಟಿ.ಎಂ.ರುದ್ರಮುನಿ, ಎಚ್.ಎಂ.ಗುರುಬಸವರಾಜ, ಎ.ಅಮಿತ್ ಕುಮಾರ, ಎಂ.ವೀರೇಶ, ಬಿ.ಚಮನ್ ವಲಿ, ಶಿವಾಜಿ, ಬಿ.ಎಂ.ವೃಷಬೇಂದ್ರಪ್ಪ, ಶಂಭುಲಿಂಗಯ್ಯ, ವೀರೇಶ್, ಯೋಗೇಶ್ವರಗೌಡ, ಶ್ರೀಕಾಂತ ಯಾದವ್, ಅಜಿತ್, ಗುರುರಾಜ, ಸಂತೋಷ, ಪ್ರದೀಪ ಇದ್ದರು.
Leave a comment