ಹರಪನಹಳ್ಳಿ:ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಗ್ರಾಮ ಘಟಕದ ನಾಮಫಲಕ ಉದ್ಘಾಟನಾ ಸಮಾರಂಭವು ಸಡಗರದಿಂದ ನೆರವೇರಿತು.ಉದ್ಘಾಟಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಪ್ಪ ಮಾತನಾಡಿ, ರೈತರ ಸವಾಲುಗಳನ್ನು ಎದುರಿಸಲು ಮೈದೂರು ಗ್ರಾಮಕ್ಕೆ ಈಗ ಒಂದು ಮಿಲಿಟರಿ ಬಂದಿದೆ. ಆ ಮಿಲಿಟರಿಯ ಮತ್ತೊಂದು ಹೆಸರೇ ಹಸಿರು ಸೇನೆ ಎಂದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಎಚ್. ಬಸವರಾಜ್ ಮಾತನಾಡಿ, ನೆಲ, ಜಲ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ರೈತ ಸಂಘದ ಹೋರಾಟ ನಿರಂತರ ಆಗಿರುತ್ತದೆ ಎಂದರು. ಹಸಿರು ಶಾಲನ್ನು ಧರಿಸಿದ್ದ ನೂರಾರು ರೈತರು ಒಟ್ಟಾಗಿ ರೈತ ಸಂಘದ ತತ್ವ ಮತ್ತು ಆದರ್ಶಗಳಿಗೆ ಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಿದರು. ಕೃಷಿ ಸಾಲ ಮನ್ನಾ, ಸಮರ್ಪಕ ವಿದ್ಯುತ್ ಸರಬರಾಜು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ನೀರಾವರಿ ಸೌಲಭ್ಯಗಳ ಕುರಿತು ಸಮಾರಂಭದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ಮರುಳಸಿದ್ದಪ್ಪ, ಅಂಕಲಿ ರಾಮಣ್ಣ, ಎಂ. ಕೊಟ್ರೇಶ್, ಎನ್. ನಾಗರಾಜ್, ನಬಿಸಾಬ್, ಶ್ರೀಧರ್ ಒಡೆಯರ್, ಎಚ್. ಬಸವರಾಜ, ಜಿ. ನಿಂಗಪ್ಪ, ಎ. ಜಗದೀಶ್, ಎಂ. ರವಿ ಸೇರಿದಂತೆ ಹಲವು ಪ್ರಮುಖರು ಹಾಗೂ ಗ್ರಾಮದ ರೈತ ಬಾಂಧವರು ಉಪಸ್ಥಿತರಿದ್ದರು.
Leave a comment