ಹರಪನಹಳ್ಳಿ: ತಾಲ್ಲೂಕಿನ ಪ್ರಮುಖ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಹಲವಾಗಲು ಗ್ರಾಮದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಹಾಗೂ ಗ್ರಾಮಸ್ಥರು ಹರಪನಹಳ್ಳಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ದಿ. ಎಸ್. ನಿಜಲಿಂಗಪ್ಪನವರು ಕಂಡ ಕನಸಿನ ದೊಡ್ಡ ಗ್ರಾಮವಾದ ಹಲವಾಗಲು ಸಾರ್ವಜನಿಕ ಆಸ್ಪತ್ರೆಯು ಹಿಂದೆ ವಾರಕ್ಕೆ 20–30 ಮಕ್ಕಳ ಶಸ್ತ್ರಚಿಕಿತ್ಸೆ ನಡೆಸುತ್ತಿತ್ತು ಹಾಗೂ ನಿತ್ಯ 150 ರಿಂದ 200 ಒಳರೋಗಿ ಮತ್ತು ಹೊರರೋಗಿಗಳಿಗೆ ಆಸರೆಯಾಗಿತ್ತು. ಆದರೆ, ಕಳೆದ 5–6 ವರ್ಷಗಳಿಂದ ಇಲ್ಲಿ ಖಾಯಂ ವೈದ್ಯರಿಲ್ಲದೆ, ಚುಚ್ಚುಮದ್ದು ಮತ್ತು ಮಾತ್ರೆಗಳ ತೀವ್ರ ಕೊರತೆ ಎದುರಾಗಿದೆ. ಸುಮಾರು 25,000 ದಿಂದ 30,000 ಜನಸಂಖ್ಯೆಗೆ ಆಸರೆಯಾಗಿರುವ ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಿ, ಖಾಯಂ ವೈದ್ಯರನ್ನು ನೇಮಿಸಬೇಕು ಎಂದು ಒತ್ತಾಯಿಸಲಾಗಿದೆ.
ಗ್ರಾಮದ ಪಶು ಆಸ್ಪತ್ರೆಗೆ ಉಪನಿರ್ದೇಶಕರ ಹುದ್ದೆ ಮಂಜೂರಾಗಿದ್ದರೂ ಕಾಯಂ ಪಶು ವೈದ್ಯರಿಲ್ಲದೆ ರೈತರು ಪರದಾಡುತ್ತಿದ್ದಾರೆ. ಈ ವ್ಯಾಪ್ತಿಯ 40 ಹಳ್ಳಿಗಳಲ್ಲಿ ಸುಮಾರು 6 ಸಾವಿರ ಹಸುಗಳು, 2 ಸಾವಿರ ಎಮ್ಮೆಗಳು, 1 ಸಾವಿರ ಎತ್ತುಗಳು, 10 ಸಾವಿರ ಕುರಿಗಳು ಹಾಗೂ 3 ಸಾವಿರ ಆಡುಗಳು ಸೇರಿ ಒಟ್ಟು 20,000ಕ್ಕೂ ಹೆಚ್ಚು ಜಾನುವಾರುಗಳಿದ್ದು, ಇವುಗಳ ಆರೋಗ್ಯ ರಕ್ಷಣೆಗೆ ತಕ್ಷಣ ಔಷಧಿ ಸರಬರಾಜು ಹಾಗೂ ಕಾಯಂ ವೈದ್ಯರನ್ನು ನಿಯೋಜಿಸಬೇಕೆಂದು ಕೋರಲಾಗಿದೆ.
ಸುಸಜ್ಜಿತ ಬಸ್ ನಿಲ್ದಾಣಕ್ಕೆ ಒತ್ತಾಯ
ಹಲವಾಗಲು ಗ್ರಾಮದ ಪ್ರಸ್ತುತ ಬಸ್ ನಿಲ್ದಾಣವು ಕಚ್ಚಾ ಮಣ್ಣಿನಿಂದ ಕೂಡಿದ್ದು, ಮುಂಗಾರು ಮಳೆಯ ಸಮಯದಲ್ಲಿ ಕೆಸರಾಗಿ ಮಾರ್ಪಡುತ್ತಿದೆ. ಇದರಿಂದಾಗಿ ಬಸ್ಸಿಗಾಗಿ ಕಾಯುವ ಮಹಿಳೆಯರು ಮತ್ತು ಮಕ್ಕಳು ಜಾರಿ ಬೀಳುತ್ತಿರುವ ನಿದರ್ಶನಗಳಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ತಕ್ಷಣವೇ ಕಾಂಕ್ರೀಟ್ ಬಸ್ ನಿಲ್ದಾಣ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಲಾಗಿದೆ.
ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮನವಿ
ಗ್ರಾಮಕ್ಕೆ ಹೊಂದಿಕೊಂಡಿರುವ ಅಂಬೇಡ್ಕರ್ ವೃತ್ತದಿಂದ ಹಿಡಿದು ನಿಮ್ಮೂರು ಶ್ರೀನಿವಾಸ್ ರೆಡ್ಡಿ ಅವರ ಜಮೀನಿನವರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮನವಿ. ಗ್ರಾಮಕ್ಕೆ ಹೊಂದಿಕೊಂಡಿರುವ ಅಂಬೇಡ್ಕರ್ ವೃತ್ತದಿಂದ ಹಿಡಿದು ನಿಮ್ಮೂರು ಶ್ರೀನಿವಾಸ್ ರೆಡ್ಡಿ ಅವರ ಜಮೀನಿನವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪುರಾತನ ಅಂತರಲಿಂಗನ ಮುರಡಿ ದೇವಸ್ಥಾನಕ್ಕೆ ₹10 ಲಕ್ಷ ಅನುದಾನ
ಗ್ರಾಮದ ಪುರಾತನ ಹಾಗೂ ಪವಿತ್ರ ಕ್ಷೇತ್ರವಾದ ‘ಅಂತರಲಿಂಗನ ಮುರಡಿ’ ಈಶ್ವರ ಲಿಂಗ ಹೊಂದಿರುವ ಜಾಗವಾಗಿದೆ. ಇಲ್ಲಿ ಮಣ್ಣು ಅಗೆದಾಗ ಅಥವಾ ಕಲ್ಲು ಎತ್ತಿದಾಗ ವಿಷಜಂತುಗಳು ಮತ್ತು ಹಾವುಗಳು ಕಂಡುಬಂದರೂ ಇಂದಿನವರೆಗೂ ಯಾವುದೇ ಮನುಷ್ಯರಿಗಾಗಲಿ ಅಥವಾ ಜಾನುವಾರುಗಳಿಗಾಗಲಿ ಯಾವುದೇ ತೊಂದರೆಯಾಗಿಲ್ಲ ಎನ್ನುವುದು ಈ ಕ್ಷೇತ್ರದ ಪವಾಡವಾಗಿದೆ. ಪ್ರಸ್ತುತ ಈ ದೇವಸ್ಥಾನದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಗೋಪುರ ನಿರ್ಮಾಣದ ಹಂತಕ್ಕೆ ಬಂದಿದೆ. ಆದ್ದರಿಂದ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಸರ್ಕಾರದ ವತಿಯಿಂದ ₹10 ಲಕ್ಷ ವಿಶೇಷ ಅನುದಾನಮಂಜೂರು ಮಾಡಿಸಿಕೊಡಬೇಕೆಂದು ಗ್ರಾಮಸ್ಥರು ವಿನಂತಿಸಿದ್ದಾರೆ.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ. ರುದ್ರಪ್ಪ, ರಾಜ್ಯ ರೈತ ಸಂಘದ ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷ ತೆಲಿಗಿ ಟಿ.ಮಂಜಪ್ಪ, ಉಪಾಧ್ಯಕ್ಷ ಯು. ಮಹೇಶಪ್ಪ, ರೈತ ಮುಖಂಡರಾದ ಟಿ. ಪುಟ್ಟಪ್ಪ, ಮಲ್ಲಪ್ಪ, ರಾಮಚಂದ್ರ ರಾವ್, ಆರ್. ಮನೋಹರ್, ಹೆಚ್.ಹನುಮಂತಪ್ಪ, ಮಲ್ಲಪ್ಪ, ಶಿವು, ಹುಚ್ಚಪ್ಪ, ಪರುಸಪ್ಪ, ನಿಂಗಪ್ಪ, ಅಶೋಕಪ್ಪ, ಹಾಲಪ್ಪ, ಅಡವೆಪ್ಪ, ಕಡತಿ ಮಣ್ಣು ಬಸಪ್ಪ, ನಿಟ್ಟೂರು ಗೋದೆಪ್ಪ, ಕುಂಚೂರು ಗುರುರಾಜ ಹಾಗೂ ರೈತ ಮುಖಂಡರಿದ್ದರು.
- Antaralingana Muradi Temple
- Bus Station
- Government Grant
- Halavagalu village
- Harapanahalli
- Infrastructure Development
- Latha Mallikarjun
- Memorandum
- Public Hospital
- Rajya Raitha Sangha
- Road Construction
- Veterinary Hospital
- ಅಂತರಲಿಂಗನ ಮುರಡಿ ದೇವಸ್ಥಾನ
- ಅನುದಾನ
- ಪಶು ಆಸ್ಪತ್ರೆ
- ಬಸ್ ನಿಲ್ದಾಣ
- ಮನವಿ
- ಮೂಲಸೌಕರ್ಯ ಅಭಿವೃದ್ಧಿ
- ರಸ್ತೆ ನಿರ್ಮಾಣ
- ರಾಜ್ಯ ರೈತ ಸಂಘ
- ಲತಾ ಮಲ್ಲಿಕಾರ್ಜುನ
- ಸಾರ್ವಜನಿಕ ಆಸ್ಪತ್ರೆ
- ಹರಪನಹಳ್ಳಿ
- ಹಲವಾಗಲು ಗ್ರಾಮ
Leave a comment