ವಿಜಯನಗರ (ಹೊಸಪೇಟೆ) : ಜಿಲ್ಲೆಯ ಪಡಿತರ ಚೀಟಿ ಫಲಾನುಭವಿಗಳು ಜುಲೈ 15ರೊಳಗಾಗಿ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಬೇಕು. ಈಗಾಗಲೇ ಇ-ಕೆವೈಸಿ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ 7500, ಹಗರಿಬೊಮ್ಮನಹಳ್ಳಿ 5443, ಹೊಸಪೇಟೆ 5434, ಹಡಗಲಿ 3650, ಕೂಡ್ಲಿಗಿ 2977 ಹಾಗೂ ಕೊಟ್ಟೂರು 1258 ಸೇರಿದಂತೆ ಒಟ್ಟು 26262 ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಬೇಕಾಗಿದೆ.
ಈ ಕುರಿತು ಅನೇಕ ಬಾರಿ ಪತ್ರಿಕಾ ಪ್ರಕಟಣೆ ಮತ್ತು ಸ್ಥಳೀಯವಾಗಿ ವ್ಯಾಪಕ ಪ್ರಚಾರವನ್ನು ನೀಡಿದ್ದರೂ ಸಹ ಈ ವರೆಗೂ ಇ-ಕೆವೈಸಿ ಮಾಡಿಸದೇ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ತುರ್ತಾಗಿ ಬಾಕಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸಲು ನಿರ್ದೇಶನ ನೀಡಿದೆ.
ಆದ್ದರಿಂದ ಈ ಅಂತಿಮ ಅವಧಿ ಮೀರಿದ ನಂತರ ಇ-ಕೆವೈಸಿ ಬಾಕಿ ಉಳಿದ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ ಇಂತಹ ಪಡಿತರ ಚೀಟಿಗಳಲ್ಲಿನ ಸದಸ್ಯರುಗಳನ್ನು ಪಡಿತರ ಚೀಟಿಗಳಿಂದ ತೆಗೆಯಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
Leave a comment