ಹರಪನಹಳ್ಳಿ : ಡಾ.ಬಿ.ಆರ್.ಅಂಬೇಡ್ಕರ ಅವರ 69ನೇ ವರ್ಷದ ಪರಿನಿರ್ವಾಣ ದಿವಸ ಆಚರಿಸದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇರಿ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ನಡೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಭೀಮವಾದದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು ಗ್ರೇಡ್ 2 ತಹಶೀಲ್ದಾರ ನಟರಾಜ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕರ್ತವ್ಯ ನಿರ್ಲಕ್ಷ್ಯ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ತಾಲ್ಲೂಕು ಅಧ್ಯಕ್ಷ ಕೆ.ಸುಭಾಸ್ ಮಾತನಾಡಿ, ತಹಶೀಲ್ದಾರ ಗಿರೀಶ್ ಬಾಬು ಅವರು ಡಿ.4ರಂದು ಡಾ.ಬಿ.ಆರ್.ಅಂಬೇಡ್ಕರ ಅವರ ಪರಿನಿರ್ವಾಣ ಆಚರಿಸಲು ಎಲ್ಲ ಇಲಾಖೆಗಳಿಗೂ ಲಿಖಿತ ಆದೇಶದ ಮೂಲಕ ಸೂಚಿಸಿದ್ದಾರೆ. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೃಷಿ ಇಲಾಖೆ ಮತ್ತು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗಳಲ್ಲಿ ಆಚರಿಸದೇ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಪ್ರಶ್ನಿಸಲು ಹೋದ ಸಂಘಟಕರಿಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ದೂರಿದರು.
ಶಿಕ್ಷಣ ಇಲಾಖೆಗೆ ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಅವರು ಕೇಳಿದಾಗ, ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಯು ತಮ್ಮ ಕಚೇರಿಯಲ್ಲು ಆಚರಿಸಿಲ್ಲ, ಹಾಗೂ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲೂ ಆಚರಣೆ ಮಾಡಲು ಆದೇಶಿಸದೇ ಕರ್ತವ್ಯ ನಿರ್ಲಕ್ಷ್ಯ ತೋರಿ, ಮಹಾನ್ ವ್ಯಕ್ತಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಪರಿನಿರ್ವಾಣ ನಿರ್ಲಕ್ಷ್ಯ ಮಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಇಲಾಖೆ ಅಧಿಕಾರಿಗಳಿಗೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ರಾಜು, ಪ್ರಶಾಂತ ಶೃಂಗಾರತೋಟ, ಜಂಟಿ ಕಾರ್ಯದರ್ಶಿ ಡಿ.ಛತ್ರಪತಿ, ಕೆ.ಭರತ್, ನಾಗರಾಜ್ ಬಿದ್ದಾಡಿ, ಮಲ್ಲಿಕಾರ್ಜುನ, ರಮೇಶ, ನಾಗರಾಜ್, ಶ್ರೀಕಾಂತ, ಅಂಜಿನಪ್ಪ ಮಾಳಗಿ, ಶಶಿಕುಮಾರ ಇದ್ದರು.
Leave a comment