ಹೊಸಪೇಟೆ (ವಿಜಯನಗರ ) : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ನಕಲಿ ಬಂಗಾರ ಜಾಲದ ಖದೀಮರು ಬೀಸುವ ಬಲೆಗೆ ಬೀಳುವ ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಈಚೆಗಷ್ಟೆ ಮೈಸೂರು ಮೂಲದ ರೇವಣ್ಣ ಎಂಬ ವ್ಯಕ್ತಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಡಿ.6ರ ಬೆಳ್ಳಂ ಬೆಳಿಗ್ಗೆ ತನ್ನ ದುಡಿಮೆಯಲ್ಲಿ ಸಂಪಾದಿಸಿದ್ದ ರೂ.7 ಲಕ್ಷ ಹಣವನ್ನು ತಂದು ನಕಲಿ ಬಂಗಾರ ಜಾಲದ ಖದೀಮರ ಬಾಯಿಗೆ ಹಾಕಿದ್ದಾರೆ. ಕಡಿಮೆ ಬೆಲೆಗೆ ಅಸಲಿ ಚಿನ್ನ ಸಿಗುತ್ತದೆ ಎನ್ನುವ ದುರಾಸೆಗೆ ಬಲಿಯಾಗಿರುವ ರೇವಣ್ಣ ಹಣ ಕಳೆದುಕೊಂಡು ಚಿಂತೆಗೀಡಾಗಿದ್ದಾರೆ.
ವಂಚನೆ ಹೇಗೆ
7899148692 ಮೊಬೈಲ್ ನಂಬರಿನಿಂದ ಶಿವಕುಮಾರ ಎಂಬ ವ್ಯಕ್ತಿ ರೇವಣ್ಣ ನವರ (XXXXXX3199) ಸಂಖ್ಯೆಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯದಿಂದ ಪರಸ್ಪರ ಸ್ನೇಹಿತನೆಂದು ಆರೋಪಿ ನಂಬಿಸಿದ್ದಾರೆ. ಡಿ.4ರಂದು ರೇವಣ್ಣ ಊರಿಗೆ ಹೋಗಿದ್ದಾಗ ಕರೆ ಮಾಡಿರುವ ಶಿವಕುಮಾರ ಹೆಸರಿನ ಆರೋಪಿಯು, ನಮ್ಮ ತಾತನ ಮನೆಯ ಪಾಯ ಅಗೆಯುವಾಗ ಚಿನ್ನದ ಬಿಲ್ಲೆಗಳು ಸಿಕ್ಕಿವೆ. ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ, ನಿಮಗೆ ಬೇಕಾದರೆ ಖರೀದಿ ಮಾಡಿ ಎಂದು ನಂಬಿಸಿದ್ದಾನೆ.
ಇದು ಸತ್ಯವೆಂದು ನಂಬಿದ ರೇವಣ್ಣ ತನ್ನ ಮನೆಯಲ್ಲಿದ್ದ ರೂ.7 ಲಕ್ಷ ಹಣವನ್ನು ತೆಗೆದುಕೊಂಡು ತನ್ನ ಗೆಳೆಯನೊಂದಿಗೆ ಡಿ.6ರಂದು ಹರಪನಹಳ್ಳಿಗೆ ಬಂದು ಇಳಿದಿದ್ದಾರೆ. ಬೆಳಿಗ್ಗೆ ಆತನನ್ನು ಕೂಲಹಳ್ಳಿ ಕ್ರಾಸ್ ಬಳಿ ಕರೆಸಿಕೊಂಡ ಆರೋಪಿ, ಪೆಟ್ರೊಲ್ ಬಂಕ್ ಬಳಿ ರೇವಣ್ಣ ಮತ್ತು ಆತನ ಸ್ನೇಹಿತನನ್ನು ಬೆದರಿಸಿ, ಅವರ ಬಳಿಯಿದ್ದ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹಾರಕನಾಳು ಗ್ರಾಮಕ್ಕೆ ಅನ್ಯ ಕೆಲಸಕ್ಕೆ ಬಂದಿದ್ದ ತಮಿಳುನಾಡು ಮೂಲದ ಇಬ್ಬರು ವ್ಯಕ್ತಿಗಳು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿರುವ ಬಗ್ಗೆ ಜನರ ಬಾಯಲ್ಲಿ ಹರಿದಾಡುತ್ತಿದೆ, ಆದರೆ ಠಾಣೆಗೆ ಯಾರೂ ದೂರು ಸಲ್ಲಿಸಿಲ್ಲ.
ನಕಲಿಬಂಗಾರ ಜಾಲದ ಬಗ್ಗೆ ಪ್ರಚಾರ ಕೊರತೆ
ಅಸಲಿ ಚಿನ್ನವೆಂದು ನಂಬಿಸಿ, ನಕಲಿ ಚಿನ್ನ ಕೊಟ್ಟು ನಗದು ಹಣ ಕಿತ್ತುಕೊಂಡು ಪರಾರಿಯಾಗುವ ಪ್ರಕರಣಗಳು ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ನಡೆಯುತ್ತಿವೆ. ಇದರ ಬಗ್ಗೆ ಕಳ್ಳತನ ಬಗ್ಗೆಯಾಗಲಿ, ನಕಲಿ ಬಂಗಾರ ಕೊಡುವ ಜಾಲದ ಬಗ್ಗೆಯಾಗಲಿ ಹರಪನಹಳ್ಳಿ ನಗರದ ಯಾವುದೇ ಭಾಗದಲ್ಲಿ ಒಂದು ಭಿತ್ತಿಪತ್ರವಿಲ್ಲ, ಬಸ್ ನಿಲ್ದಾಣಕ್ಕೆಬಂದಿಳಿದಾಗ ನೋಡಲು ನಾಮಫಲಕಗಳಿಲ್ಲ. ಹುಲಿಕಟ್ಟೆ ರಸ್ತೆ, ಹಡಗಲಿ ರಸ್ತೆ, ಕೆ.ಕಲ್ಲಹಳ್ಳಿ ಕ್ರಾಸ್ ಗಳ ಬಳಿ ನಾಮಫಲಕ ಅಳವಡಿಸಬೇಕು. ಇದುವರೆಗೂ ನಕಲಿ ಚಿನ್ನ ಪ್ರಕರಣಗಳಲ್ಲಿ ಬಂಧಿಸಿರುವ ಆರೋಪಿಗಳ ಪೊಟೊ ಸಮೇತ ನಾಮಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Leave a comment