ಹರಪನಹಳ್ಳಿ: ತಾಲ್ಲೂಕಿನ ಶೃಂಗಾರತೋಟ ನಿವಾಸಿಯಾಗಿದ್ದ ರೈತನೊಬ್ಬ ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಮನನೊಂದು ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅಲಬೂರು ರವಿ (55) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತರಾಗಿದ್ದಾರೆ. ಈ ಕುರಿತು ಅವರ ಪುತ್ರ ಅಲಬೂರು ನವೀನ್ ಹರಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ರವಿ ಅವರು ಸರ್ವೆ ನಂ: 204/A3C1 ರಲ್ಲಿನ 3-20 ಎಕರೆ ಭೂಮಿಯಲ್ಲಿ ಸುಗಂಧರಾಜ, ಸೇವಂತಿಗೆ ಸೇರಿದಂತೆ ವಿವಿಧ ಹೂವಿನ ಬೆಳೆಗಳನ್ನು ಬೆಳೆಯುತ್ತಿದ್ದರು. ತಮ್ಮ ಮೂವರು ಹೆಣ್ಣು ಮಕ್ಕಳ ಮದುವೆ ಹಾಗೂ ಕೃಷಿ ವೆಚ್ಚಗಳಿಗಾಗಿ ಬ್ಯಾಂಕ್ ಮತ್ತು ವಿವಿಧ ಸಂಘ-ಸಂಸ್ಥೆಗಳಲ್ಲಿ ಸುಮಾರು 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ವರ್ಷ ಜಮೀನಿನ ಪಂಪ್ಸೆಟ್ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೆ ತೀವ್ರ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ತೀವ್ರ ಮನನೊಂದಿದ್ದರು. ಮೇ.18ರ ರಾತ್ರಿ ತಮ್ಮ ಜಮೀನಿಗೆ ತೆರಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ನವೀನ್ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ವಿವರ : ಮೇ 18ರಂದು ಹರಪನಹಳ್ಳಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಮಗ ನವೀನ್ ಬಳಿ ಖರ್ಚಿಗೆಂದು 100 ರೂ. ಪಡೆದುಕೊಂಡು ಹೋಗಿದ್ದ ರವಿ ಅವರು ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಇಂದು (ಮೇ 19) ಮುಂಜಾನೆ ಮಗ ನವೀನ್ ಹಾಗೂ ಚಿಕ್ಕಪ್ಪ ಆನಂದ್ ಜಮೀನಿನ ಬಳಿ ಹೋಗಿ ನೋಡಿದಾಗ, ತೋಟದ ಮರವೊಂದಕ್ಕೆ ಡ್ರಿಪ್ ಪೈಪ್ನಿಂದ ನೇಣು ಬಿಗಿದುಕೊಂಡು ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೇ 18ರ ರಾತ್ರಿ 10 ಗಂಟೆಯ ನಂತರ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment