ಹರಪನಹಳ್ಳಿ : ಜಾತ್ರೆಗೆ ಬಂದಿದ್ದ ಖದೀಮರು ಖೋಟಾ ನೋಟು ಚಲಾಯಿಸಿ, ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ, ಆರೋಪಿಗಳು ಈ ಕೃತ್ಯಕ್ಕೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಳಸಿಕೊಂಡಿರುವುದು ಪೊಲೀಸರ ತನಿಖೆಗೆ ಹೊರಬಂದಿದೆ. ಯಾರೆಲ್ಲಾ ಪ್ರಕರಣದಲ್ಲಿದ್ದಾರೆ ಎನ್ನುವ ವಿವರವಾದ ಮಾಹಿತಿ ಇಲ್ಲಿದೆ ಓದಿ…
ತಾಲ್ಲೂಕಿನ ಅರಸೀಕೆರೆ ದಂಡಿನ ದುರುಗಮ್ಮ ಜಾತ್ರೆಯಲ್ಲಿ ಖೋಟಾ ನೋಟ್ ಚಲಾವಣೆ ಮಾಡುತ್ತಿದ್ದ ಅರಸೀಕೆರೆ ಗ್ರಾಮದ ಕೆ.ಮಹಮ್ಮದ್ (18), ಉಚ್ಚಂಗಿದುರ್ಗ ಮೊಹಮ್ಮದ್ ಅಖಿಲ್ (18), ಅರಸೀಕೆರೆ ನರೇಂದ್ರ ಪ್ರಸಾದ ಎನ್.ಪಿ. (19), ಕೂಡ್ಲಿಗಿ ಬಿ.ಬಾಬು (36), ಮೊಳಕಾಲ್ಮೂರು ಟಿ.ಕುಮಾರಸ್ವಾಮಿ (43) ಹಾಗೂ ಓರ್ವ ಬಾಲಕ ಸೇರಿ ಒಟ್ಟು ಆರು ಜನ ಬಂಧಿತರು. ಅವರ ಬಳಿ ಇದ್ದ 5 ಮೊಬೈಲ್ ಫೋನ್, ರೂ.500 ಮುಖಬೆಲೆಯ 80 ಖೋಟಾ ನೋಟು, ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾತ್ರೆಯಲ್ಲಿದ್ದ ಶ್ರೀಮಾತ ಅಮ್ಯೂಸ್ ಮೆಂಟ್ ಪಾರ್ಕ್ ಮಾಲೀಕ ಎಚ್.ಕೆ.ವೀರಭದ್ರಪ್ಪ ಅವರು ಆಟಿಕೆ ನಡೆಸುವ ಜಾಗದಲ್ಲಿ ಯಾರೊ ಇಬ್ಬರು ವ್ಯಕ್ತಿಗಳು ರೂ.500 ಮುಖಬೆಲೆಯ ಎರಡು ಖೊಟಾ ನೋಟ್ ಚಲಾವಣೆ ಮಾಡುತ್ತಿದ್ದಾರೆ ಎನ್ನುವ ದೂರು ಆಧರಿಸಿ, ತಂಡಗಳನ್ನು ರಚಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಡಿವೈಎಸ್ಪಿ ಸಂತೋಷ್ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್, ವಿಕಾಸ ಲಮಾಣಿ, ಪಿಎಸ್ಐ ವಿಜಯಕೃಷ್ಣ, ಕಿರಣ್ ಕುಮಾರ, ಸಿಬ್ಬಂದಿ ಆನಂದ, ರವಿದಾದಾಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ದಾದಾಪೀರ, ಹಸನ್ ಸಾಬ್, ಕೆ.ಗುರುರಾಜ, ಹರೀಶ್ ದೇವರಹಟ್ಟಿ, ಮತ್ತಿಹಳ್ಳಿ ಕೊಟ್ರೇಶ, ಗುರ್ಯನಾಯ್ಕ, ರವಿನಾಯ್ಕ, ಅಜ್ಜಪ್ಪ, ಸಿಡಿಆರ್ ವಿಭಾಗದ ಇ.ಕರಿಬಸಪ್ಪ, ಕುಮಾರನಾಯ್ಕ, ಜೀಪ್ ಚಾಲಕ ನಾಗರಾಜನಾಯ್ಕ ಒಳಗೊಂಡಿದ್ದ ತಂಡದ ಕಾರ್ಯಕ್ಕೆ ಎಸ್ಪಿ ಜಾಹ್ನವಿ ಎಸ್, ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave a comment