ಹರಪನಹಳ್ಳಿ : ಸಾವಯವ ಗೊಬ್ಬರ ಬಳಸಿ ಆಹಾರ ಧಾನ್ಯ ಬೆಳೆ ಬೆಳೆಯಿರಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಬಿಪ್ರಾಯಪಟ್ಟರು.
ನಗರದ ತಾಲ್ಲೂಕು ಪಂಚಾಯ್ತಿ ರಾಜೀವಗಾಂಧಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿ ಸಮಾಜ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ದಿನಾಚರಣೆ ಮತ್ತು ಪ್ರಧಾನಮಂತ್ರಿ ಕಿರಿ ಆಹಾರ ಉದ್ಯಮಿಗಳ ನಿಯಮ ಶುದ್ದಗೊಳಿಸುವ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು. ಊಟದ ಜೋಳ, ಸಿರಿದಾನ್ಯದ ಬೆಳಗಳಿಗೆ ಹೆಚ್ಚು ಆದ್ಯತೆ ನೀಡಿ. ರಾಸಾಯನಿಕ ಗೊಬ್ಬರ ಬಳಸದೇ, ಕೊಟ್ಟಿಗೆ ಗೊಬ್ಬರವನ್ನೆ ಬಳಸಿ ಎಂದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎ.ಕೆ.ರುದ್ರಯ್ಯ, ಎಂ.ಲಕ್ಷ್ಮಣಶೆಟ್ಟಿ ಉಪನ್ಯಾಸ ನೀಡಿದರು. ಸ್ಪಿಂಕಲರ್ ಪೈಪುಗಳು, ಕೃಷಿ ಯಂತ್ರೋಪಕರಣ, ತಾಡಪಾಲುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಸಾಧಕ ರೈತರಾದ ಷಣ್ಮುಖಪ್ಪ ಅವರಿಗೆ ಸಮಗ್ರ ಕೃಷಿ ಪ್ರಶಸ್ತಿ, ಮೈದೂರು ಬಸಮ್ಮ ತೋಟಗಾರಿಕ ಬೆಳೆ ವೈವಿದ್ಯಕರಣ ಪ್ರಶಸ್ತಿ, ತಾಲ್ಲೂಕು ಮಟ್ಟದ ಪ್ರಶಸ್ತಿಗೆ ಭಾಜನರಾದ ಸಿ.ಬಸವರಾಜ್ ಕಡಬಗೆರೆ, ಸಂತೋಷ ಹೊಸಕೋಟೆ, ತೆಲಿಗಿ ಭೀಮಪ್ಪ, ಅಂಜನಗೌಡ ಕಲ್ಗುಡಿ, ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ನಿರ್ದೇಶಕ ವಿ.ಸಿ.ಉಮೇಶ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ, ತಾಲ್ಲೂಕು ಅಧ್ಯಕ್ಷ ಮಡಿವಾಳಪ್ಪ, ಕೆಡಿಪಿ ಸದಸ್ಯ ಬಸವರಾಜಪ್ಪ, ಷಣ್ಮುಖಪ್ಪ, ಶಶಿನಾಯ್ಕ ಇದ್ದರು.
Leave a comment