ದಾವಣಗೆರೆ : ಪಂಚ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಬದುಕಿಗೆ ಆಸರೆಯಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ರೂ.3657.88 ಕೋಟಿ ಸೌಲಭ್ಯಗಳು ಜನರಿಗೆ ತಲುಪಿವೆ, ಯೋಜನೆಗಳನ್ನು ಇನ್ನಷ್ಟು ಸಮರ್ಪಕ ಅನುಷ್ಟಾನಕ್ಕಾಗಿ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 6 ಸದಸ್ಯರನ್ನು ಒಳಗೊಂಡ ಸಮಿತಿ ರಚನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ.ಬಸವರಾಜ್ ತಿಳಿಸಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2023 ರ ಜುಲೈನಿಂದ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಉಚಿತ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ನೀಡಲಾಗುತ್ತಿತ್ತು, ಈಗ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಯೋಜನೆ ಪ್ರಾರಂಭವಾದಾಗಿನಿಂದ 12,42,812 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದು 5ಕೆಜಿ ಅಕ್ಕಿ ಬದಲಾಗಿ ಹಿಂದೆ ನಗದನ್ನು ಅವರ ಖಾತೆಗೆ ರೂ.346.33 ಕೋಟಿ ವರ್ಗಾಯಿಸಲಾಗಿರುತ್ತದೆ.
ಡಿಬಿಟಿ ನಂತರ 2026 ಜುಲೈ ವರೆಗೆ 13,02,065 ಫಲಾನುಭವಿಗಳಿಗೆ ರೂ.248.87 ಕೋಟಿ ಅಕ್ಕಿ ವಿತರಣೆಗೆ ಖರ್ಚು ಮಾಡಲಾಗಿದೆ. ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ನ್ಯಾಯಬೆಲೆ ಅಂಗಡಿಯಿಂದ ಚಿಕ್ಕ ಉಜ್ಜಿನಿ ಗ್ರಾಮದ ಜನರು 2.5 ಕಿ.ಮೀ ದೂರ ಕ್ರಮಿಸಿ ಧಾನ್ಯ ತರಬೇಕಿದ್ದನ್ನು ಸಮಿತಿಯಲ್ಲಿ ಚರ್ಚಿಸಿದ್ದು ಇಲ್ಲಿಗೆ ಉಪ ಕೇಂದ್ರವನ್ನಾಗಿ ಸ್ಥಾಪನೆ ಮಾಡಿ ಅದೇ ಗ್ರಾಮದಲ್ಲಿ ಪಡಿತರ ವಿತರಣೆಗೆ ಕ್ರಮವಹಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಜಂಟಿ ನಿರ್ದೇಶಕರು ಸಭೆಗೆ ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಡಿ 2023 ರ ಆಗಸ್ಟ್ ನಿಂದ ಯೋಜನೆ ಆರಂಭವಾಗಿದ್ದು ಇಲ್ಲಿಯವರೆಗೆ 376847 ಮಹಿಳೆಯರಿಗೆ 32 ಕಂತುಗಳಲ್ಲಿ ಒಟ್ಟು 2264.33 ಕೋಟಿ ಅವರ ಖಾತೆಗೆ ಜಮಾ ಮಾಡಲಾಗಿದೆ.
ಇ-ಕೆವೈಸಿ ಪ್ರಕ್ರಿಯೆ ಇನ್ನು ಆರಂಭವಾಗಿರುವುದಿಲ್ಲ, ಗೃಹಲಕ್ಷ್ಮಿ ಯೋಜನೆಯಿಂದ ಬಡವರ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆ ನಿರ್ವಹಣೆಯಲ್ಲಿ ಸಾಕಷ್ಟು ಅನುಕೂಲವಾಗಿದ್ದು ಇದರಿಂದ ಆರ್ಥಿಕವಾಗಿ ಬಲ ಬಂದಿದೆ. ಉಳ್ಳವರು ಸ್ವಯಂ ಪ್ರೇರಿತವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಬಿಟ್ಟುಕೊಡಲು ಮುಂದೆ ಬಂದವರನ್ನು ಪ್ರೋತ್ಸಾಹಿಸಲು ಇಲಾಖೆಯಿಂದ ಕ್ರಮವಹಿಸಬೇಕೆಂದು ತಿಳಿಸಿ, ಗೃಹಲಕ್ಷ್ಮಿ ಯೋಜನೆ ಕಲ್ಪಿಸಿಕೊಡಲಾಗುತ್ತದೆ ಎಂದು ಯಾರಾದರೂ ಮಧ್ಯವರ್ತಿಗಳು ಹಣವನ್ನು ಪಡೆದಲ್ಲಿ ಮತ್ತು ಪಡೆಯುತ್ತಿದ್ದಲ್ಲಿ ಇಲಾಖೆಯ ಗಮನಕ್ಕೆ ತರಬೇಕೆಂದು ಅಧ್ಯಕ್ಷರು ತಿಳಿಸಿದರು.
ಶಕ್ತಿ ಯೋಜನೆಯಿಂದ ಜಿಲ್ಲೆಯಲ್ಲಿ 15.90 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು ಇದರ ವೆಚ್ಚವಾಗಿ ರೂ.473.52 ಕೋಟಿ ಕೆಎಸ್ಆರ್ಟಿಸಿಗೆ ಪಾವತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ಹೋಗಲು ಬಸ್ಗಳ ಸಮಸ್ಯೆ ಇದ್ದು ಕೆಎಸ್ಆರ್ಟಿಸಿಯಿಂದ ಮಾರ್ಗಗಳ ಸಮೀಕ್ಷೆ ನಡೆಸಿ ಬಸ್ ಸೌಕರ್ಯ ಕಲ್ಪಿಸಲು ತಿಳಿಸಿದರು. ಇದೇ ವೇಳೆ ಸದಸ್ಯರಾದ ಶ್ರೀನಿವಾಸ್ ಮಾತನಾಡಿ ಶಿವಮೊಗ್ಗದಿಂದ ಚನ್ನಗಿರಿ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಬಸ್ಗಳು ಚನ್ನಗಿರಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲ, ಈ ಬಸ್ಗಳು ತರಿಕೇರೆ, ಬೀರೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಬಸ್ಗಳಾಗಿದ್ದು ರಸ್ತೆ ಅಭಿವೃದ್ದಿ ಕಾರಣ ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸುತ್ತಿವೆ.
ಈ ಬಸ್ಗಳು, ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ಗೃಹಜ್ಯೋತಿ ಯೋಜನೆಯಡಿ 512386 ಗ್ರಾಹಕರು ನೊಂದಾಯಿಸಿದ್ದು 473.52 ಕೋಟಿ ವಿದ್ಯುತ್ ಬಿಲ್ ಹೊಂದಾಣಿಕೆಗೆ ಖರ್ಚು ಮಾಡಲಾಗಿದೆ. ಗ್ರಾಹಕರ ಇ-ಕೆವೈಸಿ ಪರಿಶೀಲನೆ ನಡೆಸಲಾಗಿದ್ದು 12 ಸಾವಿರದಷ್ಟು ಬಾಕಿ ಇವೆ ಎಂದು ಬೆಸ್ಕಾಂ ಇಂಜಿನಿಯರ್ ಸಭೆಗೆ ತಿಳಿಸಿದರು. ಯುವನಿಧಿ ಯೋಜನೆಯಡಿ 14077 ವಿದ್ಯಾರ್ಥಿಗಳಿಗೆ ರೂ.44.23 ಕೋಟಿ ಪಾವತಿಸಲಾಗಿದೆ. ಹೊಸದಾಗಿ ನೋಂದಣಿ ನಡೆಯುತ್ತಿದ್ದು 15 ಸಾವಿರದಷ್ಟು ವಿದ್ಯಾರ್ಥಿಗಳು ನೊಂದಾಯಿಸಿರುವರು. ಅರ್ಹ ನಿರುದ್ಯೋಗಿ ಡಿಪ್ಲೋಮಾ, ಪದವೀಧರರು ಶಿಷ್ಯ ವೇತನ ಪಡೆಯಲು ವ್ಯಾಪಕ ಜಾಗೃತಿ ಮೂಡಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಮಾತನಾಡಿ ಸರ್ಕಾರ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪತ್ರದಂತೆ ಗ್ರಾಮ ಪಂಚಾಯಿತಿ ಮಟ್ಟ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ 6 ಸದಸ್ಯರನ್ನು ಒಳಗೊಂಡ ಗ್ಯಾರಂಟಿ ಸಮಿತಿಗಳನ್ನು ರಚಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಅನುಷ್ಟಾನ ಸಮಿತಿ ಉಪಾಧ್ಯಕ್ಷರಾದ ನಂಜಾನಾಯ್ಕ್, ಕೆ.ಎನ್.ಮಂಜುನಾಥ್, ರಾಜೇಶ್ವರಿ, ಸದಸ್ಯರಾದ ಎಸ್.ಎಸ್.ಗಿರೀಶ್, ಲಿಯಾಕತ್ ಅಲಿ, ಷಂಶೀರ್ ಅಹ್ಮದ್, ಹೆಚ್.ಎ.ಗದಿಗೇಶ್, ಜಿ.ಆರ್.ರಾಘವೇಂದ್ರಗೌಡ, ಸಿ.ನಾಗರಾಜ್, ಕೆ.ಶಿವಶಂಕರ್, ಶಿವರಾಮ ನಾಯಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Leave a comment