ಹರಪನಹಳ್ಳಿ: “ಕಾಲೇಜಿನ ಸುವರ್ಣ ಮತ್ತು ರಜತ ಮಹೋತ್ಸವದ ಯಶಸ್ಸು ಕೇವಲ ಸಿಬ್ಬಂದಿಗೆ ಸೀಮಿತವಲ್ಲ. ಇದು ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯ ಸಹಕಾರ ಮತ್ತು ಒಗ್ಗಟ್ಟು ತೀರಾ ಅಗತ್ಯ,” ಎಂದು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ಟೂರೇಶ್ವರ ತಿಳಿಸಿದರು.
ನಗರದ ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವೀ.ವಿ. ಸಂಘದ ಅಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಶತಮಾನದ ಶೈಕ್ಷಣಿಕ ಇತಿಹಾಸವಿರುವ ಬಳ್ಳಾರಿಯ ವೀ.ವಿ. ಸಂಘದಡಿ 1972ರಲ್ಲಿ ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿ 50 ವರ್ಷ ಪೂರೈಸಿದ ಸುವರ್ಣ ಸಂಭ್ರಮ ಹಾಗೂ 1999ರಲ್ಲಿ ಆರಂಭವಾಗಿರುವ ಎಸ್.ಎಸ್.ಎಚ್. ಜೈನ್ ಪಿಯು ಕಾಲೇಜು 25 ವರ್ಷ ಪೂರೈಸಿದ ರಜತ ಮಹೋತ್ಸವ ಜಂಟಿಯಾಗಿ ಆಚರಿಸಲಾಗುತ್ತಿದೆ. ಸರ್ವರ ಸಹಕಾರ ಅಗತ್ಯವೆಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಮಾತನಾಡಿ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಹಳೇ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ನಿಷ್ಪಕ್ಷಪಾತವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, “ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಮಹಿಳಾ ಸ್ವಾವಲಂಬನೆ, ಆರೋಗ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ವಿಚಾರಗೋಷ್ಠಿಗಳನ್ನು ನಡೆಸಬೇಕು. ಜೊತೆಗೆ ತಾಲೂಕಿನ ಐತಿಹಾಸಿಕ ತಾಣಗಳಾದ ಬಾಗಳಿ, ನೀಲಗುಂದ, ಉಚ್ಚಂಗಿದುರ್ಗ ಹಾಗೂ ಹರಪನಹಳ್ಳಿ ಪಾಳೆಯಗಾರರ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರಗಳು ಮತ್ತು ಕೃಷಿ, ಸ್ವಯಂ ಉದ್ಯೋಗದ ಮಳಿಗೆಗಳಿಗೆ ಅವಕಾಶ ನೀಡಬೇಕು,” ಎಂದು ಸಲಹೆ ನೀಡಿದರು.
ಸಭೆಯಲ್ಲಿ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ್ರು, ಸದಸ್ಯರಾದ ಆರುಂಡಿ ನಾಗರಾಜ, ದೊಡ್ಡಬಸಪ್ಪ, ಅಮೃತ, ಅಂಬ್ಲಿ ಯೋಗೇಶ್, ಪಾಟೀಲ್ ಜಗದೀಶಗೌಡ, ಹಳೇ ವಿದ್ಯಾರ್ಥಿಗಳಾದ ಅರಸಿಕೆರೆ ಎ.ಎಚ್. ಕೊಟ್ರೇಶ್, ಸಾಹಿತಿ ಬಾಗಳಿ ಬಣಕಾರ್ ರಾಜಶೇಖರ, ಶಿಕ್ಷಕ ಸುಭಾಷ್ಚಂದ್ರ, ನಿವೃತ್ತ ಮುಖ್ಯಶಿಕ್ಷಕ ಎ.ಒ. ಉಮಾಪತಿ, ಕೊಟ್ರೇಶ್ ಮಾತನಾಡಿದರು.
ಐಕ್ಯೂಎಸಿ ಸಂಚಾಲಕ ಗೋವರ್ಧನ, ಹಳೇ ವಿದ್ಯಾರ್ಥಿ ಸಂಘದ ಸಂಚಾಲಕ ನವಾಜ್ ಬಾಷಾ, ಪ್ರಾಂಶುಪಾಲರಾದ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ, ಮಹೇಶ ಉಪ್ಪೀನ, ಉಪನ್ಯಾಸಕರಾದ ಡಾ. ರಾಜಶೇಖರ, ಆರುಂಡಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
Leave a comment