ಹರಪನಹಳ್ಳಿ: ಇಂದಿನ ಯುವಜನತೆ ಪ್ರೀತಿ-ಪ್ರಣಯ ಹಾಗೂ ವಿರಹದ ಬೇಗುದಿಗೆ ಸಿಲುಕಿ ಮಾದಕ ದ್ರವ್ಯಗಳ (ಡ್ರಗ್ಸ್) ದಾಸರಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಡಾ. ಬಾಬು ಜಗಜೀವನ್ ರಾಮ್ ಸಭಾ ಭವನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಜಾಗೃತಿ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಚೀನ ಕಾಲದ ಹವ್ಯಾಸ, ಇಂದಿನ ಯುವಕರಿಗೆ ಕಂಠಕ
ಡ್ರಗ್ಸ್ ಸಂಸ್ಕೃತಿ ಅತೀ ಪುರಾತನ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಹಿಂದೆ ಸನ್ಯಾಸಿಗಳು ಭೋಗ ಜೀವನವನ್ನು ತ್ಯಜಿಸುವ ಉದ್ದೇಶದಿಂದ ಹುಕ್ಕಾ ಸೇವನೆ ಮಾಡುತ್ತಿದ್ದರು. ಆದರೆ, ಕಾಲ ಬದಲಾದಂತೆ ಇಂದಿನ ಯುವ ಪೀಳಿಗೆ ಅದನ್ನು
ದುಶ್ಚಟವನ್ನಾಗಿ ರೂಢಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಒಮ್ಮೆ ಈ ವ್ಯಸನಕ್ಕೆ ಬಲಿಯಾದರೆ ಅದರಿಂದ ಹೊರಬರಲಾಗದೆ ಯುವಕರು ತಾಪತ್ರಯ ಪಡುತ್ತಾರೆ. ಪೋಷಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಜೀವನ ರೂಪಿಸಬೇಕು” ಎಂದು ಶಾಸಕರು ಕಿವಿಮಾತು ಹೇಳಿದರು.
ಕೆಟ್ಟ ಸಹವಾಸದಿಂದ ದೂರವಿರಿ: ಎಸ್ಪಿ ಎಸ್. ಜಾಹ್ನವಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಸ್. ಜಾಹ್ನವಿ, “ಕಳೆದ ಒಂದು ವರ್ಷದಿಂದ ವಿವಿಧ ಶಾಲಾ-ಕಾಲೇಜುಗಳಲ್ಲಿ ಇಲಾಖೆಯಿಂದ
ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಮನಸ್ಸು ಚಂಚಲತೆಯಿಂದ ಕೂಡಿದ್ದು, ಹೊಸತು ಯಾವುದನ್ನಾದರೂ ಸ್ವೀಕರಿಸಲು ತುಡಿಯುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಮಗರಿವಿಲ್ಲದೇ ಕೆಟ್ಟ ಸಹವಾಸದಿಂದ ದುಶ್ಚಟಕ್ಕೆ ಬಲಿಯಾಗುತ್ತಾರೆ. ದುಶ್ಚಟಕ್ಕೆ ಪ್ರೇರೇಪಿಸುವವರಿಂದ ಅಂತರ ಕಾಯ್ದುಕೊಂಡು, ಯಾರಾದರೂ ಒತ್ತಾಯಿಸಿದರೆ ಧೈರ್ಯವಾಗಿ ‘ಬೇಡ ಬ್ರೋ’ ಎಂದು
ನಿರಾಕರಿಸಿ, ನಿಮ್ಮ ಭವಿಷ್ಯದತ್ತ ಗಮನ ಹರಿಸಿ” ಎಂದರು.
ಅಕ್ರಮ ಗಾಂಜಾ ಸುಳಿವು ಸಿಕ್ಕರೆ 1908 ಗೆ ಕರೆ ಮಾಡಿ
ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್ ಮಾತನಾಡಿ, “ಮಾದಕ ದ್ರವ್ಯ ಸೇವನೆಯು ಇತ್ತೀಚೆಗೆ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುತ್ತಿದ್ದು, ಅದನ್ನು ತಡೆಗಟ್ಟಲು ಸರ್ಕಾರ ‘ಬೇಡ ಬ್ರೋ’ ಅಭಿಯಾನ ಪ್ರಾರಂಭಿಸಿದೆ. ದುಶ್ಚಟವನ್ನು ‘ಬೇಡ’ ಎಂದು ತಿರಸ್ಕರಿಸುವುದು ಕೀಳರಿಮೆಯಲ್ಲ, ಅದು ನಿಮ್ಮ ಧೈರ್ಯದ ಸಂಕೇತ. ನಿಮ್ಮ ಸುತ್ತಮುತ್ತ ಗಾಂಜಾ ಅಥವಾ ಅಫೀಮು ಬೆಳೆಯುವುದು ಕಂಡುಬಂದರೆ ತಕ್ಷಣ 1908 ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ. ಈ ಪಿಡುಗು ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ” ಎಂದರು.
ಗಮನ ಸೆಳೆದ ಕಿರು ನಾಟಕ ಇದೇ ವೇಳೆ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಇಲಾಖೆ
ಸಿಬ್ಬಂದಿ ಜಂಟಿಯಾಗಿ ‘ಬೇಡ ಬ್ರೋ’ ಜಾಗೃತಿ ಅಭಿಯಾನದ ಕಿರು ಅಣಕು ನಾಟಕ ಪ್ರದರ್ಶಿಸಿದರು. ಸಿಪಿಐ ಮಹಂತೇಶ್ ಸಜ್ಜನ್ ಹಾಗೂ ಇಲಾಖೆಯ ಸಿಬ್ಬಂದಿ ಸ್ವತಃ ಪಾತ್ರಧಾರಿಗಳಾಗಿ ಅಭಿನಯಿಸಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಠಾಣಾ ವ್ಯಾಪ್ತಿಯ ಪಿಎಸ್ಐಗಳಾದ ಶಂಭುಲಿಂಗಯ್ಯ ಎಸ್. ಹಿರೇಮಠ, ವಿಜಯಕೃಷ್ಣ, ನಾಗರತ್ನಮ್ಮ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
Leave a comment