ಹರಪನಹಳ್ಳಿ: ತಾಲೂಕಿನ ಅರಸಿಕೇರೆ ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬದ ಶುಭ ಸಂದರ್ಭದಲ್ಲಿ ಶ್ರೀ ದಂಡಿನ ದುರುಗಮ್ಮ ದೇವಿಯ ವೈಭವದ ಮೆರವಣಿಗೆಯನ್ನು ಅತ್ಯಂತ ಶ್ರದ್ಧೆ ಮತ್ತು ವಿಜೃಂಭಣೆಯಿಂದ ನೆರವೇರಿಸಲಾಯಿತು.ನಾಗರ ಪಂಚಮಿಯ ಸದುದ್ದೇಶದಿಂದ ಶ್ರೀ ದಂಡಿನ ದುರುಗಮ್ಮ ದೇವಿಯ ಮೂರ್ತಿಗೆ ನಾನಾ ಬಗೆಯ ಪುಷ್ಪಗಳು ಹಾಗೂ ಆಭರಣಗಳಿಂದ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ಗ್ರಾಮದ ಕ್ಷೇಮ, ಸಮೃದ್ಧಿ ಹಾಗೂ ನವರಸಪೂರ್ಣ ಜೀವನಕ್ಕಾಗಿ ದೇವಿಗೆ ವಿಶೇಷ ಹರಕೆ ಮತ್ತು ಪೂಜೆಗಳನ್ನು ಸಲ್ಲಿಸಲಾಯಿತು.ಗ್ರಾಮದ ಪ್ರಮುಖ ರಸ್ತೆಗಳು ಮತ್ತು ಬೀದಿಗಳಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ವೈಭವದಿಂದ ಮೆರವಣಿಗೆ ಮಾಡಲಾಯಿತು.ತಮಟೆ,ಹಾಗೂ ಸಾಂಪ್ರದಾಯಿಕ ಮಂಗಳವಾದ್ಯಗಳ ನಿನಾದದೊಂದಿಗೆ ಭಕ್ತರು ನೃತ್ಯ ಮಾಡುತ್ತಾ ಮೆರವಣಿಗೆಗೆ ಮೆರುಗು ತಂದರು.
ಗ್ರಾಮದ ಮುಖಂಡರು, ರೈತರು, ತಾಯಂದಿರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಮನೆಗಳ ಮುಂದೆ ರಂಗೋಲಿ ಬಿಡಿಸಿ, ದೇವಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಾಗರ ಪಂಚಮಿಯ ಹಬ್ಬದ ಸಡಗರದೊಂದಿಗೆ ದಂಡಿನ ದುರುಗಮ್ಮ ದೇವಿಯ ಮೆರವಣಿಗೆಯು ಭಕ್ತಿ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ಐಕ್ಯತೆಗೆ ಸಾಕ್ಷಿಯಾಯಿತು.
Leave a comment