ಹರಪನಹಳ್ಳಿ : ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ತಾಲ್ಲೂಕಿನ ಹಲುವಾಗಲು ಗ್ರಾಮದ ಮಾವಿನಗುಡಿ ಹತ್ತಿರವಿರುವ ಕುಟುಂಬಸ್ಥರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಭಾರತ ಕಮ್ಯುನಿಷ್ಟ್ ನೇತೃತ್ವದಲ್ಲಿ ಮಾವಿನಗುಡಿ ಕುಟುಂಬಸ್ಥರು ನಗರಕ್ಕೆ ಆಗಮಿಸಿ, ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ 30 ಕುಟುಂಬಗಳು 30 ವರ್ಷಗಳಿಂದ ಮನೆಕಟ್ಟಿಕೊಂಡು ವಾಸ ಮಾಡುತ್ತಿವೆ. ಗ್ರಾಮ ಪಂಚಾಯಿತಿ ಡಿಮ್ಯಾಂಡ್ ಪುಸ್ತಕದಲ್ಲಿ ನೊಂದಣಿಯಾಗಿ, ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಇವರಿಗೆ ವಿದ್ಯುತ್ ಸೌಕರ್ಯ, ಕುಡಿಯುವ ನೀರು, ಸಾರಿಗೆ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪೊಲೀಸ್ ಠಾಣೆಯಿಂದ ಈಗ ತಾತ್ಕಾಲಿಕವಾಗಿ ಪಡೆದಿರುವ ವಿದ್ಯುತ್ ತಂತಿ ಬದಲಾಯಿಸಬೇಕು. ಮಾವಿನಗುಡಿ ಬಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಇವರು ವಾಸವಿರುವ ಪ್ರದೇಶದ ಮೂಲಕ ಕುಂಚೂರು, ಹಲುವಾಗಲು ಗ್ರಾಮಗಳಿಗೆ ಓಡಾಡುವ ಸಾರಿಗೆ ಬಸ್ ಗಳು ನಿಲುಗಡೆ ಮಾಡಬೇಕು. ಸಮಸ್ಯೆಗಳು ಜೀವಂತ ಇವೆ, ಇವುಗಳನ್ನು ಪರಿಹರಿಸಬೇಕಾದ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಮಾಡುತ್ತಿದೆ. ಇವರಿಗೆ ತಕ್ಷಣ ಸೌಲಭ್ಯ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಸಂತೋಷ ಎಚ್ಚರಿಕೆ ನೀಡಿದರು.
ಸಮಸ್ಯೆ ಆಲಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ಅವರು, 15 ದಿನದ ಒಳಗಾಗಿ ಸಮಸ್ಯೆ ಇರುವ ಸ್ಥಳಕ್ಕೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಸಂತೋಷ, ತಾಲ್ಲೂಕು ಕಾರ್ಯದರ್ಶಿ ರಮೇಶ ನಾಯ್ಕ, ಸಹ ಕಾರ್ಯದರ್ಶಿ ಬಳಿಗನೂರು ಕೊಟ್ರೇಶ್, ಗುಡಿಹಳ್ಳಿ ಹಾಲೇಶ್, ಬಿ.ಭಾಗ್ಯ, ಎಚ್.ನೀಲಮ್ಮ ಇತರರಿದ್ದರು.
Leave a comment