ಹರಪನಹಳ್ಳಿ :ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ ಕಂದಾಯ ಉಪವಿಭಾಗದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ ಜಾಗೃತಿ ಮತ್ತು ಸಫಾಯಿ ಕರ್ಮಚಾರಿಗಳ ಉಪವಿಭಾಗ ಮಟ್ಟದ ಸಮಿತಿ ಸಭೆ ಜರುಗಿತು.
ಅಧ್ಯಕ್ಷತೆ ವಹಿಸಿ ಉಪವಿಬಾಗಾಧಿಕಾರಿ ಟಿ.ಸುರೇಶ್ ಕುಮಾರ ಮಾತನಾಡಿ, ಕೊಟ್ಟೂರಿನಲ್ಲಿ ಕಾರ್ಮಿಕರಿಗೆ ನಿವೇಶನ ಹಂಚಿಕೆಗೆ ಜಾಗ ಗುರುತಿಸುವಂತೆ ಒಳಚರಂಡಿ ಮಂಡಳಿಯಿಂದ ಪತ್ರ ಬಂದಿದೆ ಎಂದು ತಿಳಿಸಿದರು.
ಕೊಟ್ಟೂರಿನಲ್ಲಿ ಒಂದು, ಹೂವಿನ ಹಡಗಲಿ 2 ಜಾತಿನಿಂಧನೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿರುವ ಕುರಿತು ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಅವರು ವಿಷಯ ಪ್ರಸ್ತಾಪಿಸಿದರು. ಯಾವುದೇ ಜಾತಿ, ಧರ್ಮ, ಸಂಘಟನೆಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು, ಅಸ್ಪೃಶ್ಯತೆ ಆಚರಣೆ, ಜಾತಿ ನಿಂಧನೆ ಪ್ರಕರಣ ಕಂಡುಬಂದರೆ ತಕ್ಷಣ ಕ್ರಮವಹಿಸಿ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಮದ್ಯ ಪ್ರವೇಶಿಸಿದ ಸಮಿತಿ ಸದಸ್ಯ ಗೋಣೆಪ್ಪ ಮಾತನಾಡಿ, ಗಲಾಟೆ ನಡೆದ ತಕ್ಷಣ ಸ್ಥಳಕ್ಕೆ ಬೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ ಎಂದರು.
ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಅವರು ಮಾತನಾಡಿ, ತಾಲ್ಲೂಕು ಪಂಚಾಯಿತಿಯಲ್ಲಿ ರೂ. 20 ಲಕ್ಷ ಹಣ ದುರುಪಯೋಗವಾಗಿದೆ ಎಂದು ಪರಿಶಿಷ್ಟ ಸಮುದಾಯದ ಸಿಬ್ಬಂದಿ ಮೇಲೆ ಎಫ್ಐಆರ್ ಮಾಡಿರುವ ಬಗ್ಗೆ ಪ್ರಸ್ತಾಪಿಸಿದರು, ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ಅವರು, ಆಡಿಟ್ ತನಿಖಾ ವರದಿ ಹಾಗೂ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಎನ್ಆರ್ಎಲ್ಎಂ ಯೋಜನೆ ಸಿಬ್ಬಂದಿ ಮೇಲೆ ದೂರು ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಮಿತಿಯ ಸದಸ್ಯ ಮೈದೂರು ಒ.ರಾಮಪ್ಪ ಮಾತನಾಡಿ, ಆದಿಜಾಂಭವ ಅಭಿವೃದ್ದಿ ನಿಗಮದ ಸೌಲಭ್ಯಗಳು 35 ಸಾವಿರದಷ್ಟಿರುವ ಮಾದಿಗರ ಜನಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಸಭೆ ಗಮನ ಸೆಳೆದರು, ಆಗ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ತಿಳಿಸಿದರು.
ಸಮಿತಿ ಸದಸ್ಯ ಕಾರ್ಯದರ್ಶಿಯು ಆಗಿರುವ ಸಹಾಯಕ ನಿರ್ದೇಶಕ ಎಸ್.ಆರ್.ಗಂಗಪ್ಪ ಮಾತನಾಡಿ, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ, ವಿವಿಧ ಅಭಿವೃದ್ದಿ ನಿಗಮಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕೊಟ್ಟೂರು, ಹರಪನಹಳ್ಳಿ ಹಾಗೂ ಹಡಗಲಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹರಪನಹಳ್ಳಿ ನಗರಸಭೆ ಪೌರಾಯುಕ್ತೆ ರೇಣುಕಾ ಎಸ್ ದೇಸಾಯಿ, ಹಡಗಲಿ ಪುರಸಭೆ ಮುಖ್ಯಾಧಿಕಾರಿ, ಹಡಗಲಿ ಇಒ ಪರಮೇಶ್ವರಪ್ಪ, ಹರಪನಹಳ್ಳಿ ಇಒ ವೈ.ಎಚ್.ಚಂದ್ರಶೇಖರ, ಪಿಎಸ್ಐ ಶಂಭುಲಿಂಗ ಸಿ ಹಿರೇಮಠ, ಸಮಿತಿ ಸದಸ್ಯೆ ಜಾನ್ಸಿ, ವ್ಯವಸ್ಥಾಪಕಿ ಯಾಸ್ಮಿನ್ ಶುಗುಪ್ತಾ, ವಾರ್ಡನ್ ಬಸವರಾಜ್ ಇತರರಿದ್ದರು.
Leave a comment