ಹರಪನಹಳ್ಳಿ: ನ್ಯಾಯಾಲಯದಲ್ಲಿ ಚುನಾವಣೆಗೆ ಮಧ್ಯಂತರ ತಡೆ ಆದೇಶ ಪ್ರಕಟವಾಗುತ್ತಿದ್ದಂತೆ ನ್ಯಾಯಾಲಯದ ಆದೇಶ ಪಾಲಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಿಂದ ಸ್ವಯಂಪ್ರೇರಿತರಾಗಿ ದೂರ ಉಳಿದ 22 ಅಭ್ಯರ್ಥಿಗಳನ್ನು ಅಭಿನಂದಿಸಿದ ಘಟನೆ ನಡೆಯಿತು.
ಶನಿವಾರ ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಲಯದ ಆದೇಶ ಪಾಲಿಸಿ ಚುನಾವಣೆಯಿಂದ ದೂರ ಉಳಿದ ಈ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿ, “ನ್ಯಾಯಾಲಯದ ಆದೇಶ ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಏ.30ರಂದೇ ತಡೆಯಾಜ್ಞೆ ಆದೇಶವಾಗಿದೆ. ಚುನಾವಣಾ ಅಧಿಕಾರಿಗಳು ಪಕ್ಷಪಾತ ಮಾಡದೇ ಆದೇಶದ ಪ್ರತಿ ಪರಿಶೀಲಿಸಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕಿತ್ತು. ಆದರೆ ಅವರು ಪಾಲಿಸದಿರುವುದು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತೆ. ಆ ಚುನಾವಣಾ ಫಲಿತಾಂಶ ಸ್ವಯಂ ಘೋಷಿತ, ಅದು ಯಾವುದೇ ಅರ್ಹತೆ ಪಡೆಯುವುದಿಲ್ಲ,” ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲ್ಲೂಕು ಅಧ್ಯಕ್ಷ ಕೆ.ಸುಭಾಷ್ ಮಾತನಾಡಿ, ನಿಜವಾದ ಅರ್ಥದಲ್ಲಿ ನ್ಯಾಯಾಲಯದ ಆದೇಶ ಪಾಲಿಸಿದ ಅಭ್ಯರ್ಥಿಗಳೇ ಜಯಶಾಲಿಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಿ.ಮನೋಹರ, ಕಾರ್ಯದರ್ಶಿ ಸೂರ್ಯನಾಯ್ಕ, ರಾಜ್ಯ ಪರಿಷತ್ ಸದಸ್ಯ ಮಕರಬ್ಬಿ ಷರೀಪ್, ಮಂಜುನಾಥ ಪೂಜಾರ, ಎ.ನಾಗೇಂದ್ರಪ್ಪ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಟಿ.ಎಚ್.ಎಂ. ಲತಾ, ಗಿರಿರಾಜ್, ಕೆ.ಅಂಜಿನಪ್ಪ, ಸುಬ್ಬಣ್ಣ, ಶಫಿ, ಉಸ್ಮಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Leave a comment