ಹರಪನಹಳ್ಳಿ: ಜೆಸಿಐ ಸಂಸ್ಥೆಯು ಮರಗಿಡಗಳಲ್ಲಿ ಮಡಿಕೆಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿರುವುದು ಅತ್ಯಂತ ಮಾದರಿಯಾಗಿದೆ. ಇಂತಹ ಕಾರ್ಯಗಳ ಮೂಲಕ ಪಕ್ಷಿ ಸಂಕುಲವನ್ನು ಸಂರಕ್ಷಿಸಿದರೆ ಮಾತ್ರ ಪರಿಸರ ಉಳಿಯಲು ಮತ್ತು ಸಮೃದ್ಧಗೊಳ್ಳಲು ಸಾಧ್ಯ ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ತಿಳಿಸಿದರು.
ನಗರದ ಸಮತಾ ಉದ್ಯಾನವನದಲ್ಲಿ ಶನಿವಾರ ಜ್ಯೂನಿಯರ್ ಚೇಂಬರ್ ಇಂಟರನ್ಯಾಷನಲ್ ಅಲುಮ್ನಿ ಕ್ಲಬ್ (ಜೆಎಸಿ) ಆಯೋಜಿಸಿದ್ದ ‘ಪಕ್ಷಿಗಳಿಗೆ ನೀರು ಕಲ್ಪಿಸುವ ಮಡಿಕೆ ಅಳವಡಿಸುವ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೇಸಿಗೆ ಮುಗಿಯುವ ತನಕ ಮಡಿಕೆಗಳಲ್ಲಿ ನೀರಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಲು ಅವರು ಸಲಹೆ ನೀಡಿದರು.
ಜೆಎಸಿ ತಾಲ್ಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಮಾತನಾಡಿ, “ಒಂದು ಪಾತ್ರೆ ನೀರು – ನೂರಾರು ಪಕ್ಷಿಗಳಿಗೆ ನೆರವು” ಎಂಬ ಘೋಷಣೆಯೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂದಿನ 10 ದಿನಗಳ ಕಾಲ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮನೆಯ ಛಾವಣಿ ಅಥವಾ ಸುತ್ತಮುತ್ತಲಿನ ಮರಗಳಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅತ್ಯುತ್ತಮ ಪಕ್ಷಿ ಪ್ರೇಮಿಗಳಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಸ್.ರವಿಶಂಕರ, ವಲಯ ಮಂಡಳಿ ಸಂಸತ್ ಸದಸ್ಯ ವಿಶ್ವನಾಥ, ಪ್ರಸನ್ನಕುಮಾರ ಜೈನ್, ರವೀಂದ್ರ ಅಧಿಕಾರ, ಇರ್ಷಾದ್ ಭಾಷ, ಪ್ರಭಾಕರ ಕನ್ನಿಹಳ್ಳಿ, ಶಿವಕುಮಾರ, ಹುಲಿರಾಜ್ ಮತ್ತಿತರರು ಉಪಸ್ಥಿತರಿದ್ದರು.
Leave a comment