ಹರಪನಹಳ್ಳಿ: ಕ್ರೀಡೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧರಾಗಿ; ವೈ.ಡಿ. ಅಣ್ಣಪ್ಪ ಕರೆ

Sirisuddi Kannada
2 Min Read

ಹರಪನಹಳ್ಳಿ : “ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಸರ್ಕಾರಿ ನೌಕರಿ ಪಡೆಯಬೇಕು. ಆ ಮೂಲಕ ತಮ್ಮ ಕುಟುಂಬಗಳ ಆರ್ಥಿಕ ಏಳ್ಗೆಗೆ ಶ್ರಮಿಸಬೇಕು” ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಕಿವಿಮಾತು ಹೇಳಿದರು.

ತಾಲ್ಲೂಕಿನ ಯರಬಾಳು ಗ್ರಾಮದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಯರಬಾಳು ಕ್ರಿಕೆಟ್ ಪ್ರೀಮಿಯರ್ ಲೀಗ್’ (YCPL) ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೂಜಾಟ ಬಿಟ್ಟು ಸಂಭ್ರಮದಿಂದ ಹಬ್ಬ ಆಚರಿಸಿ

ಯುಗಾದಿ ಹಬ್ಬದ ಸಂದರ್ಭದಲ್ಲಿ ಗ್ರಾಮದ ಯುವಕರೆಲ್ಲರೂ ಒಗ್ಗೂಡಿ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಚಾರ. ಆದರೆ ಹಬ್ಬದ ನೆಪದಲ್ಲಿ ಜೂಜಾಟವಾಡಿ ಹಣ ಕಳೆದುಕೊಳ್ಳಬಾರದು. ಬದಲಾಗಿ ಸಿಹಿ ಹಂಚಿ ಸಂಭ್ರಮಿಸಬೇಕು. ಪೋಷಕರಿಗೆ ಒಳ್ಳೆಯ ಹೆಸರು ತರುವಂತಹ ಸಾಧನೆ ಮಾಡುವತ್ತ ಯುವಜನತೆ ಗಮನಹರಿಸಬೇಕು ಎಂದು ಅವರು ತಿಳಿಸಿದರು.

ಗ್ರಾಮದ ಮುಖಂಡ ಪಾಟೀಲ ರಾಜನಗೌಡ್ರು ಮಾತನಾಡಿ, “ಗೆಳೆಯರ ಬಳಗದಿಂದ ಪ್ರತಿ ವರ್ಷ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಗ್ರಾಮದಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗಿದೆ. ವರ್ಷದಿಂದ ವರ್ಷಕ್ಕೆ ಯುವಕರ ಉತ್ಸಾಹ ಇಮ್ಮಡಿಗೊಳ್ಳಲಿ” ಎಂದು ಹಾರೈಸಿದರು.

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಶಿಕ್ಷಕ ಇಟಗಿ ನಾಗಪ್ಪ ಮಾತನಾಡಿ, “ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿಯಿಂದ ಆಟವಾಡಬೇಕು. ಗ್ರಾಮದ ಪ್ರತಿಯೊಂದು ಅಭಿವೃದ್ಧಿ ಕೆಲಸಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅತ್ಯಗತ್ಯ” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಮಹಿಳಾ ಮುಖಂಡರಾದ ವನಜಾಕ್ಷಮ್ಮ, ವಿಷ್ಣು ಯರಬಾಳು, ಶಿವಾನಂದಪ್ಪ ಪಾಟೀಲ್, ನೀಲಗುಂದ ಮಂಜುನಾಥ್, ಪ್ರಸನ್ನ ಪಲ್ಲಕ್ಕಿ, ಅಂಗಡಿ ಮಲ್ಲಿಕಾರ್ಜುನ್, ತಿಮ್ಮೇನಹಳ್ಳಿ ಗಜೇಂದ್ರಪ್ಪ, ಸೋಮಣ್ಣ, ನಂದ್ಯಾಲ ಶಿವಕುಮಾರ್, ಎ.ಬಿ. ನಾಗೇಂದ್ರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಗೊಲ್ಡನ್ ತಂಡಕ್ಕೆ ‘ಚಾಂಪಿಯನ್’ ಪಟ್ಟ

ತೀವ್ರ ಕುತೂಹಲ ಕೆರಳಿಸಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೊಲ್ಡನ್ ತಂಡ ಪ್ರಥಮ ಸ್ಥಾನ ಪಡೆದು 10 ಸಾವಿರ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರಾಜಧಾನಿ ತಂಡ ದ್ವಿತೀಯ ಸ್ಥಾನ ಪಡೆದು 4,500 ರೂಪಾಯಿ ನಗದು ಹಾಗೂ ಟ್ರೋಫಿ ಪಡೆದು ಸಂಭ್ರಮಿಸಿತು.

Share This Article
Leave a Comment