ವಿಜಯನಗರ (ಹೊಸಪೇಟೆ): ತುಂಗಭದ್ರಾ ಜಲಾಶಯದ ಬಹುನಿರೀಕ್ಷಿತ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯವು ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಮೇ ಅಂತ್ಯದ ವೇಳೆಗೆ ಎಲ್ಲಾ 33 ನೂತನ ಗೇಟ್ಗಳ ಅಳವಡಿಕೆ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಶುಕ್ರವಾರ ಜಲಾಶಯದ ಮೇಲ್ಭಾಗಕ್ಕೆ ತೆರಳಿ ತಾಂತ್ರಿಕ ತಂಡ ನಡೆಸುತ್ತಿರುವ ಕಾಮಗಾರಿಯನ್ನು ಖುದ್ದು ವೀಕ್ಷಿಸಿದ ಸಚಿವರು, ನಂತರ ಮಾಧ್ಯಮಗಳೊಂದಿಗೆ ಪ್ರಗತಿ ಪರಿಶೀಲನೆಯ ವಿವರಗಳನ್ನು ಹಂಚಿಕೊಂಡರು.
ಜೂನ್ ಮುಂಗಾರಿಗೆ ಜಲಾಶಯ ಸಜ್ಜು
ಸಚಿವರು ನೀಡಿದ ಮಾಹಿತಿಯ ಮುಖ್ಯಾಂಶಗಳು ಇಲ್ಲಿವೆ: ಗೇಟ್ ಅಳವಡಿಕೆ ಪ್ರಗತಿ: ಈಗಾಗಲೇ 18 ನೂತನ ಕ್ರೆಸ್ಟ್ ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದೆ. ಪ್ರಸ್ತುತ 5 ಗೇಟ್ಗಳ ಕೆಲಸ ನಡೆಯುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಒಟ್ಟು 23 ಗೇಟ್ಗಳ ಕಾರ್ಯ ಮುಗಿಯಲಿದೆ.
-
ಸುರಕ್ಷಿತ ಕಾಮಗಾರಿ: ಹಳೆಯ ಗೇಟ್ ಬದಲಿಸುವ ಸಮಯದಲ್ಲಿ ಅಣೆಕಟ್ಟಿನ ಮೂಲ ರಚನೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಜ್ಞರು ಮತ್ತು ಮುಖ್ಯ ಎಂಜಿನಿಯರ್ಗಳು ದೃಢಪಡಿಸಿದ್ದಾರೆ.
-
ಸಮಯ ಮಿತಿ: ಏಪ್ರಿಲ್ನಲ್ಲಿ ಬಾಕಿ ಇರುವ 10 ಗೇಟ್ಗಳನ್ನು ಅಳವಡಿಸಲಾಗುವುದು. ಮೇ ಅಂತ್ಯಕ್ಕೆ ಕಾಮಗಾರಿ ಮುಗಿಸಿ, ಜೂನ್ನಲ್ಲಿ ಆರಂಭವಾಗುವ ಮುಂಗಾರು ಮಳೆಗಾಲಕ್ಕೆ ಜಲಾಶಯವನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗುವುದು.
‘ನವಲಿ’ ಯೋಜನೆ ಮತ್ತು ಹೂಳು ತೆಗೆಯುವ ಸವಾಲು
ಜಲಾಶಯದಲ್ಲಿ ತುಂಬಿರುವ ಹೂಳಿನ ಸಮಸ್ಯೆಗೆ ಪರಿಹಾರವಾಗಿ ರೂಪಿಸಲಾದ ‘ನವಲಿ’ ಸಮಾನಾಂತರ ಜಲಾಶಯ ಯೋಜನೆಯ ಬಗ್ಗೆ ಸಚಿವರು ಮಹತ್ವದ ಮಾಹಿತಿ ನೀಡಿದರು:
“ನವಲಿ ಯೋಜನೆಯ ಪ್ರಸ್ತಾವನೆಯನ್ನು ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳಿಗೆ ಕಳುಹಿಸಲಾಗಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದ್ದು, ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ಸಾಗಿದೆ. ತೆಲಂಗಾಣ ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗುತ್ತಿದ್ದು, ಶೀಘ್ರವೇ ಬಗೆಹರಿಯುವ ವಿಶ್ವಾಸವಿದೆ.”
ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಸಂಸದರೊಂದಿಗೆ ಕರ್ನಾಟಕದ ನಿಯೋಗ ಚರ್ಚೆ ನಡೆಸಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ಕೊಪ್ಪಳ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಎಎಸ್ಪಿ ಮಂಜುನಾಥ್, ಆರ್. ಹೇಮಂತ್ ಕುಮಾರ್ ಸೇರಿದಂತೆ ಟಿಬಿ ಬೋರ್ಡ್ ಮತ್ತು ಕೆಎನ್ಎನ್ಎಲ್ ಅಧಿಕಾರಿಗಳಾದ ಶ್ರೀನಿವಾಸ ಮಲ್ಲಿಗಿವಾಡ, ಧರ್ಮರಾಜ್, ಜ್ಞಾನೇಶ್ವರ ಹಾಗೂ ಇತರರು ಉಪಸ್ಥಿತರಿದ್ದರು.
Leave a comment