ಹರಪನಹಳ್ಳಿ : ದಾವಣಗೆರೆ ಜಿಲ್ಲೆ ಜಗಳೂರು ವಿದಾನಸಭಾ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ ಎಂದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಜಗಳೂರು ವಿದಾನಸಭಾ ಕ್ಷೇತ್ರಕ್ಕೆ ಒಳಪಡುವ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಹಾಲಮ್ಮನ ತೋಪಿನಲ್ಲಿ 7 ಗ್ರಾಮ ಪಂಚಾಯಿತಿಯ ಬಿಜೆಪಿ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲ ಮಾಡಿಕೊಳ್ಳದೇ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಸನ್ನದ್ಧರಾಗಬೇಕು ಎಂದರು.
ಶೀಘ್ರ ಗ್ರಾಮಗಳ ಹಂತದಲ್ಲಿ ಗ್ರಾಮ ಸಮಿತಿಗಳನ್ನು ರಚಿಸಿ, ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಜನರ ಸೇವೆ ಮಾಡುತ್ತೇನೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ, ಯಾವುದೇ ಗ್ರಾಮದ ಕಾರ್ಯಕರ್ತರೂ ಆಹ್ವಾನಿಸಿದರೆ ಬರುವುದಾಗಿ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬೇವಿನಹಳ್ಳಿ ಕೆಂಚನಗೌಡ ಮಾತನಾಡಿ, ಪಕ್ಷದಲ್ಲಿ ಯಾವುದೇ ಗೊಂದಲವಿದ್ದರೂ ಪರಿಹರಿಸಿಕೊಂಡು, ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶಿಸ್ತುಬದ್ಧವಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಜಗಳೂರು ನೂತನ ಮಂಡಲ ಉಪಾಧ್ಯಕ್ಷ ಪ್ರಶಾಂತ್ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ಗೆಲುವಿನ ನಂತರ ಅರಸೀಕೆರೆ ಹೋಬಳಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅಭಿವೃದ್ದಿ ಶೂನ್ಯವಾಗಿದೆ. ಅರಸೀಕೆರೆ ಬಸ್ ನಿಲ್ದಾಣ ಉದ್ಘಾಟನೆ ಆಗಿಲ್ಲ ಎಂದು ದೂರಿದರು. ಮಂಡಲ ಪದಾಧಿಕಾರಿಗಳ ಆಯ್ಕೆ : ಜಗಳೂರು ವಿದಾನಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬೇವಿನಹಳ್ಳಿ ಕೆಂಚನಗೌಡ, ಜಗಳೂರು ಮಂಡಲ ಉಪಾಧ್ಯಕ್ಷರಾಗಿ ಪ್ರಶಾಂತ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಕಮ್ಮತ್ತಹಳ್ಳಿ ಮುರುಗೇಶ್, ಧರ್ಮನಾಯ್ಕ ಅವರನ್ನು ಆಯ್ಕೆ ಮಾಡಲಾಯಿತು.
ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮಂಜುನಾಥಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಯರಬಳ್ಳಿ ಡಿ.ಸಿದ್ದಪ್ಪ, ಪುಣಬಗಟ್ಟಿ ಬಸವನಗೌಡ್ರು, ಶರಣಪ್ಪ, ಜಾತಪ್ಪ, ರಾಮಚಂದ್ರಪ್ಪ, ಯಶೋಧರ್ ನಾಯ್ಕ್, ಕಾವಲಹಳ್ಳಿ ಭರಮಣ್ಣ, ಸಿದ್ದಣ್ಣ, ಫಣಿಯಾಪುರದ ಲಿಂಗರಾಜ್, ಕೆಂಚನಗೌಡ, ಜಾತಪ್ಪ, ರಾಜನಾಯ್ಕ್, ಯುವರಾಜ್, ಭರಮನಗೌಡ, ಮಲ್ಲಿಕಾರ್ಜುನ, ಚಂದ್ರನಾಯ್ಕ ಇದ್ದರು.
Leave a comment