ಹರಪನಹಳ್ಳಿ : ತಾಲ್ಲೂಕಿನ ಕಂಚಿಕೇರಿ ಗ್ರಾಮದಲ್ಲಿ ಜರುಗಿದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಶೆಲ್ಯೂಟ್ ಮಾಡಿ ಗುರು ನಮನ ಸಲ್ಲಿಸಿ, ಹಳೆಯ ನೆನಪು ಮೆಲುಕು ಹಾಕಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 1996-97ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು, ಸಿದ್ದೇಶ್ವರ ವಸತಿ ಪ್ರೌಢಶಾಲೆಯ 2001ನೇ ಸಾಲಿನ 10ನೇ ತರಗತಿಯ ಸಹಪಾಠಿಗಳು ಸಮಾಗಮಗೊಂಡು, ಅಕ್ಷರ ಕಲಿಸಿದ ಶಿಕ್ಷಕರಿಗೆ ಸನ್ಮಾನಿಸಿ, ಅವರಿಗೆ ಶೆಲ್ಯೂಟ್ ಮಾಡುವ ಮೂಲಕ ಗಮನ ಸೆಳೆದರು.
ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಡಿ.ವಿ.ತಿಮ್ಮಪ್ಪ, ಚನ್ನಬಸಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದಾಗ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿದಾಗ ಮಾತ್ರ ಅಕ್ಷರ ಹೇಳಿಕೊಟ್ಟ ನನ್ನಂತ ಸಾವಿರಾರು ಶಿಕ್ಷಕರ ಕೆಲಸ ಸಾರ್ಥಕ ಎನಿಸುತ್ತದೆ. ಒಂದಿಲ್ಲೊಂದು ಹುದ್ದೆ, ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿ ಶಂಕರನಾಯ್ಕ ಮಾತನಾಡಿ, ಇಲ್ಲಿ ಸೇರಿರುವ ಪ್ರತಿಯೊಬ್ಬರು ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದಾರೆ. ಈ ಕಾರ್ಯಕ್ರಮ ಭಾವನೆಗಳ ಸಂಗಮ ಎಂದು ಬಣ್ಣಿಸಿದರು. ಹಳೆಯ ವಿದ್ಯಾರ್ಥಿ ಪಟ್ನಾಮದ ವೆಂಕಟೇಶ್ ಮಾತನಾಡಿ, ಸಹಪಾಠಿಗಳು ಒಂದೆಡೆ ಸೇರಿ ಗುರುಗಳಿಗೆ ವಂದಿಸುವುದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಜೀವನದಲ್ಲಿ ಸರಿಯಾದ ಮಾರ್ಗ ಹಾಕಿಕೊಟ್ಟ ಗುರುವಿನ ಕೆಲಸ ಶ್ರೇಷ್ಠವಾಗಿದೆ ಎಂದರು. ಶಿಕ್ಷಕರಾದ ಕುಬೇರಪ್ಪ, ವೆಂಕಟೇಶಮೂರ್ತಿ, ತಿಮ್ಮಪ್ಪ, ಗುರುಸಿದ್ದಪ್ಪ, ಚನ್ನಬಸಪ್ಪ, ಜಗದೀಶ, ಸಿ.ಬಿ.ಬಸವರಾಜಪ್ಪ, ಸಾರಥಿ ಹನುಮಂತಪ್ಪ, ಎಂ.ಕುಸುಮ, ಬಾರಿಕರ ಹನುಮಕ್ಕ, ಕೆ.ಮಹಾದೇವಿ, ಹಳ್ಳಿ ವನಜಾಕ್ಷಿ , ಜ್ಯೋತಿ, ಶಂಕರ, ಯುವರಾಜ್ ಇದ್ದರು.
Leave a comment