ಹೊಸಪೇಟೆ (ವಿಜಯನಗರ) : ದೇಶದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಮತ್ತೊಮ್ಮೆ ಜಾರಿಗೆ ತರುವ ಹುನ್ನಾರಗಳು ನಡೆಯುತ್ತಿವೆ ಎಂದು ಮಾನವಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ಒಳಕ್ರೀಡಾಂಗಣದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಭಾನುವಾರ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದಿನ ಪಾರಂಪರಿಕ ಶಿಕ್ಷಣ ಪದ್ದತಿಯಿಂದ ಎರಡು ಸಾವಿರ ವರ್ಷಗಳ ಕಾಲ ಶೂದ್ರರು ಶಿಕ್ಷಣ ವಂಚಿತರಾದರು. ಈಗ ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ ಎಂಬುದು ಗೊತ್ತಾಗಿರುವುದೇ ನಮ್ಮ ಸಂವಿಧಾನ ಕೊಟ್ಟಿರುವ ಅವಕಾಶದಿಂದ. ಅಕ್ಷರ ಜಗತ್ತಿನಲ್ಲಿ ದಲಿತರು,ಶೋಷಿತರು, ಹಿಂದುಳಿದ ವರ್ಗದವರು ಗುರುತಿಸಿಕೊಳ್ಳಲು ಅಂಬೇಡ್ಕರ ಅವರು ರಚಿಸಿದ ಸಂವಿಧಾನ ಕಾರಣ. ಜಾತಿ, ಧರ್ಮದ,ಲಿಂಗ ಹೆಸರಿನಲ್ಲಿ ತುಳಿಯುವ ಸಂಸ್ಕೃತಿಗೆ ಕಡಿವಾಣ ಹಾಕುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಹಂಪಿಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಚೆಲುವರಾಜ, ಸ್ವಾತಂತ್ರ್ಯ ನಂತರ ಶಿಕ್ಷಣ ಸಾರ್ವತ್ರಿಕರಣಗೊಂಡಿದೆ. ಶಿಕ್ಷಣ ವಂಚಿತ ಕೆಲ ಅಲೆಮಾರಿ, ಕಾಡುವಾಸಿ, ಬುಡಕಟ್ಟು ವಾಸಿಗಳನ್ನು ಗುರುತಿಸಿ, ಶಿಕ್ಷಣ ಕೊಡಿಸುವ ಕೆಲಸ ಆಗಬೇಕಿದೆ ಎಂದರು.ಆಳುವ ವರ್ಗದ ಕುತಂತ್ರದಿಂದ ಅನೇಕ ಸಮುದಾಯಗಳು ಶಿಕ್ಷಣ ವಂಚಿತರಾಗಿದ್ದವು. ಪ್ರತಿಭೆ ಕೇವಲ ಅಂಕಕ್ಕೆ ಸೀಮಿತವಾಗಿಲ್ಲ. ಕಷ್ಟಪಟ್ಟು ದುಡಿದು ಶಿಕ್ಷಣ ಪಡೆಯುವ ಪ್ರತಿಯೊಬ್ಬರು ಪ್ರತಿಭಾವಂತರು. ಉತ್ತಮವಾದ ನಡವಳಿಕೆ ಬೆಳೆಸಿಕೊಳ್ಳುವದೇ ಶಿಕ್ಷಣದ ನಿಜ ಅರ್ಥ ಎಂದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಮಕ್ಕಳು ಶಿಕ್ಷಣ ಪಡೆದು, ಉನ್ನತ ಹುದ್ದೆ ಅಲಂಕರಿಸಿ, ಆ ಮೂಲಕ ನೆರಳು ಕೊಡುವ ಮರದಂತೆ, ಸಾವಿರಾರು ಜನರಿಗೆ ನೆರವು ನೀಡಿ ಎಂದು ಹೇಳಿದರು. ಯುವ ಮುಖಂಡ ಎಚ್.ಆರ್.ವಿರೂಪಾಕ್ಷ , ಸ್ಥಳೀಯ ಪ್ರದೇಶದಲ್ಲಿ ಉನ್ನತ ಕೌಶಲ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಿದರೆ, ಉದ್ಯೋಗಕ್ಕಾಗಿ ವಲಸೆ ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜ್ ಮಾತನಾಡಿ, ಓದುವ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು, ಪುಸ್ತಕ ಓದಿ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕು ಆಗಮಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿಭಾಗೀಯ ಸಂಚಾಲಕ ಇರ್ಫಾನ್ ಮುದುಗಲ್, ಜಿಲ್ಲಾ ಸಂಚಾಲಕ ಸೋಮಶೇಖರ ಬಣ್ಣದಮನೆ, ಕೂಡ್ಲಿಗಿ ಬೋರಸ್ವಾಮಿ, ಹಡಗಲಿ ಶಶಿಧರ ನವಲಿ, ಹರಪನಹಳ್ಳಿ ಎಂ.ಎಚ್.ಪರಶುರಾಮ್, ಎಲ್.ಪ್ರಕಾಶ್, ಗಿರಿರಾಜ್ ಇದ್ದರು.
Leave a comment