ಹರಪನಹಳ್ಳಿ : ರಾಜಕೀಯ ಪ್ರಜಾಪ್ರಭುತ್ವ ದುರ್ಬಳಕೆ ಆಗುತ್ತಿದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ಜಾತಿ ಮೇಲೆ ನಿಂತಿರುವ ಪ್ರಸ್ತುತ ದಿನಗಳಲ್ಲಿ ಮನುಷ್ಯ ಪ್ರೀತಿಸುವ ಸಮಾಜ ಕಟ್ಟುವ ಅಗತ್ಯವಿದೆ ಎಂದು ಬಂಡಾಯ ಸಾಹಿತಿ ಸಿದ್ದನಗೌಡ ಪಾಟೀಲ್ ಹೇಳಿದರು.
ನಗರದ ಹೊರವಲಯದಲ್ಲಿರುವ ಸಮತ ರೆಸಾರ್ಟ್ ನಲ್ಲಿ ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವ ತಲ್ಲಣಗಳು ಮತ್ತು ಪ್ರಸ್ತುತ ಭಾರತ’ ಕುರಿತು ವಿಚಾರಗೋಷ್ಠಿಯಲ್ಲಿ ಅವರು ವಿಷಯ ಮಂಡಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ಸಾಮಾನ್ಯ ಜನರ ಬದುಕಿಗೆ ಅತ್ಯಗತ್ಯವಾಗಿರುವ ವಿದ್ಯುತ್, ಆಸ್ಪತ್ರೆ ಹಾಗೂ ಶಿಕ್ಷಣ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರಜೆಗಳ ಮೂಲ ಆಶಯಗಳಿಗೆ ಪೂರಕವಾಗಿ ಉಳಿದಿಲ್ಲ. ನಮ್ಮ ನೆಲ, ಜಲ ಹಾಗೂ ಸಂಸ್ಕೃತಿಯ ಸಂಪತ್ತನ್ನು ಆಳುವ ಸರ್ಕಾರಗಳು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟಕ್ಕಿಟ್ಟಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಬುದ್ಧನ ಸಂಘರ್ಷ ಅಂದಿನ ಸಾಮ್ರಾಜ್ಯಗಳ ವಿರುದ್ಧ ನಡೆದರೆ, ಬಸವಣ್ಣನವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಗಾಂಧೀಜಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ, ಮತ್ತೊಂದು ವರ್ಗವು ಅದರೊಟ್ಟಿಗೆ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು ಎಂದು ತಿಳಿಸಿದರು.
ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಬುದ್ದ, ಬಸವ ಮತ್ತು ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ, ಜೀವನದಲ್ಲಿ ಯಶಸ್ಸು ಸಾಧಿಸಲು ಸಾದ್ಯವಾಗುತ್ತದೆ ಎಂದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ್ ಮಾತನಾಡಿ, ರಾಜಕಾರಣಿಗಳನ್ನು ಸಾರಾಸಗಟಾಗಿ ದೂರುವುದು ಸುಲಭ. ಆದರೆ ಇಂದಿನ ರಾಜಕಾರಣ ನಾವು ಅಂದುಕೊಂಡಷ್ಟು ಸುಲಭವಲ್ಲ. ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವಾಗ ಅನುಭವಿಸುವಷ್ಟೇ ನೋವು ಮತ್ತು ತಲ್ಲಣಗಳನ್ನು ಒಬ್ಬ ರಾಜಕಾರಣಿ ಚುನಾವಣೆ ಎದುರಿಸಿದ ಬಳಿಕ ಎದುರಿಸುತ್ತಾನೆ ಎಂದು ರಾಜಕಾರಣಿಗಳ ನೋವನ್ನು ತೆರೆದಿಟ್ಟರು.
ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಅವರು ಅರಿವೆ ಅಂಬೇಡ್ಕರ ಕ್ರಾಂತಿಗೀತೆ ಹಾಡಿ ಗಮನ ಸೆಳೆದರು. ನಟ ಶ್ರೀನಗರ ಕಿಟ್ಟಿ ಸಮತ ಕ್ರೀಡಾಲೋಕ ನಾಮಫಲಕ ಉದ್ಘಾಟಿಸಿದರು. ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿದರು. ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ, ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಕಾನಾಮಡಗು ದಾಸೋಹ ಮಠದ ಐಮಡಿ ಶರಣಾರ್ಯರು, ಅರಸೀಕೆರೆ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ,
ಕೂಲಹಳ್ಳಿ ಪಟ್ಟದ ಚಿನ್ಮಯಿ ಸ್ವಾಮೀಜಿ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಮಾಜಿ ಸಂಸದ ವೈ.ದೇವೇಂದ್ರಪ್ಪ, ನಿರ್ಮಾಪಲ ಛಲಾದಿ ಕುಮಾರ, ಮುಖಂಡರಾದ ಮಹಿಮಾ ಜೆ ಪಟೇಲ್, ಎನ್.ಕೊಟ್ರೇಶ್, ಕೆ.ಬಿ.ಕೊಟ್ರೇಶ್, ಎಚ್.ಕೆ.ಹಾಲೇಶ, ಶಶಿಧರ ಪೂಜಾರ, ಜಯಲಕ್ಷ್ಮಿ, ಶೈಲಜಾ, ಇರ್ಫಾನ್ ಮುದುಗಲ್, ಪ್ರಕಾಶ, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸದಾನಂದ, ಎನ್.ಜಿ.ಮನೋಹರ, ಜಯಲಕ್ಷ್ಮಿ ಸೇರಿದಂತೆ ಅನೇಕರಿದ್ದರು.
- Democracy India
- Harapanahalli
- Karnataka News
- Kum Veerabhadrappa
- Madara Chennaiah Swamiji
- Mahima J Patel
- Pichalli Srinivas
- Politics
- PT Parameshwar Naik
- Samatha Resort
- Seminar
- Siddanagouda Patil
- Srinagar Kitty
- ಕರ್ನಾಟಕ ಸುದ್ಧಿ
- ಕುಂ ವೀರಭದ್ರಪ್ಪ
- ಪಿ.ಟಿ. ಪರಮೇಶ್ವರನಾಯ್ಕ್
- ಪಿಚ್ಚಳ್ಳಿ ಶ್ರೀನಿವಾಸ
- ಪ್ರಜಾಪ್ರಭುತ್ವ ತಲ್ಲಣಗಳು
- ಮಹಿಮಾ ಜೆ ಪಟೇಲ್
- ಮಾದಾರ ಚೆನ್ನಯ್ಯ ಸ್ವಾಮೀಜಿ
- ರಾಜಕೀಯ
- ವಿಚಾರಗೋಷ್ಠಿ
- ಶ್ರೀನಗರ ಕಿಟ್ಟಿ
- ಸಮತ ರೆಸಾರ್ಟ್
- ಸಿದ್ದನಗೌಡ ಪಾಟೀಲ್
- ಸಿರಿಸುದ್ದಿ
- ಹರಪನಹಳ್ಳಿ
Leave a comment