ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಪುಷ್ಪಗಿರಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿ ಹೊರಹೊಮ್ಮಿತು.
ವಿದ್ಯಾರ್ಥಿಗಳು ವಿವಿಧ ಮಾದರಿಗಳು, ರಸಗೊಬ್ಬರ ತಯಾರಿಕಾ ವಿಧಾನ, ಹಸಿ ಹಾಗೂ ಒಣ ಕಸ ವಿಂಗಡಣೆ, ಆಹಾರ ಸಂಸ್ಕರಣೆಯ ವಿಧಾನಗಳು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಪರಿಸರ ಸಂರಕ್ಷಣೆ, ನೀರಿನ ಮೂಲಗಳು ಹಾವುಗಳ ಸಂರಕ್ಷಣೆ, ಅರಣ್ಯ ನಾಶದಿಂದಾಗುವ ದುಷ್ಪರಿಣಾಮಗಳು, ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಒಳಗೊಂಡು 165 ಮಾದರಿಗಳನ್ನು ತಯಾರಿಸಿ ಗಮನ ಸಳೆದರು.
ಶಾಲೆಗೆ ಬೇಟಿ ನೀಡಿದ್ದ ಪೋಷಕರು ಹಾಗೂ ಸಾರ್ವಜನಿಕರು, ಮಕ್ಕಳು ತಯಾರಿಸಿದ್ದ ವಿಜ್ಞಾನದ ಮಾದರಿಗಳನ್ನು ವೀಕ್ಷಣೆ ಮಾಡಿ ಸಂತಸಪಟ್ಟರು. ಮಕ್ಕಳಲ್ಲಿರುವ ಕ್ರಿಯಾಶೀಲತೆ, ವಿಜ್ಞಾನದ ಬಗ್ಗೆ ಇರುವ ಕುತೂಹಲ ಕಂಡು ಬೆರಗಾದರು. ಶಾಲಾ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ, ಪದಕ ನೀಡಿ ಪ್ರೋತ್ಸಾಹಿಸಲಾಯಿತು. ವಸ್ತು ಪ್ರದರ್ಶನದಲ್ಲಿ ಉತ್ತಮ ಮಾದರಿಗೆ ಬಹುಮಾನ ವಿತರಿಸಿದರು.ಚಾಲನೆ ನೀಡಿದ ಶಕುಂತಲಾ ಮಾತನಾಡಿ,ದೇಶದ ಸಮಗ್ರ ಪ್ರಗತಿಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಪುಷ್ಪಗಿರಿ ಶಾಲೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು. ಪುಷ್ಪಗಿರಿ ಕಲ್ಯಾಣ ಸಂಸ್ಥೆ ಅಧ್ಯಕ್ಷ ಮಹಾರುದ್ರಾಚಾರ್, ಕಾರ್ಯದರ್ಶಿ ನಾಗರಾಜಪ್ಪ ಮಾತನಾಡಿದರು. ಆಡಳಿತ ಮಂಡಳಿ ನಿರ್ದೇಶಕ ಪ್ರಶಾಂತ್ ಎನ್. ಮುಖ್ಯ ಶಿಕ್ಷಕ ಸಂತೋಷ್ ಸೇರಿದಂತೆ ಶಿಕ್ಷಕರು ಪೋಷಕರು ಹಾಜರಿದ್ದರು.
‘ಮಕ್ಳಳ ಸೃಜನಶೀಲತೆ, ಆಸಕ್ತಿ, ಪ್ರತಿಭೆ ಅನಾವರಣಗೊಳ್ಳಲು ವಸ್ತು ಪ್ರದರ್ಶನ ಸಾಕ್ಷಿಯಾಗಿದೆ. ಕಲಿಕೆಯ ಜ್ಞಾನ ಎಲ್ಲರಿಗೂ ತಲುಪಲಿ’
ನಾಗರಾಜಪ್ಪ, ಶಾಲಾ ಕಾರ್ಯದರ್ಶಿ
Leave a comment