ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಕೌಶಲ್ಯ ಬೆಳೆಸುವ ಹಾಗೂ ಓದುವ ಹವ್ಯಾಸವನ್ನು ಹೆಚ್ಚಿಸುವ ಸದುದ್ದೇಶದಿಂದ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಉಚಿತ ಬೇಸಿಗೆ ಶಿಬಿರ ಆರಂಭಿಸಿ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು.
ಶಿಬಿರದ ನೇತೃತ್ವವಹಿಸಿರುವ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಹೆಚ್.ಎಂ. ಮಾತನಾಡಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ, ಅವರಲ್ಲಿ ಏಕಾಗ್ರತೆ ಹಾಗೂ ಓದುವ ಹವ್ಯಾಸವನ್ನು ಹೆಚ್ಚಿಸಲು ಯಾವುದೇ ಫಲಾಪೇಕ್ಷೆಯಿಲ್ಲದೆ ಈ ಶಿಬಿರ ಆಯೋಜಿಸಲಾಗಿದೆ. ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಜ್ಞಾನಧಾರೆ ಎರೆಯಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಮಂಜುನಾಥ ಪೂಜಾರ ಮಾತನಾಡಿ, ‘ಸರ್ಕಾರಿ ಶಾಲಾ ಮಕ್ಕಳಲ್ಲಿ ಶಿಕ್ಷಣದ ಜೊತೆ ಕೌಶಲ ಹೆಚ್ಚಿಸಲು ಶಿಬಿರದಲ್ಲಿ ಕಲಿಸಲಾಗುವುದು’ ಎಂದರು. ಶಾಲಾ ಶಿಕ್ಷಣ ಇಲಾಖೆ ಸಂಘದ ಅಧ್ಯಕ್ಷ ಗಿರಿರಾಜ್, ‘ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಸಂಘಟನೆಯ ಬಲವರ್ಧನೆಯಾಗುತ್ತಿದೆ. ಇಂತಹ ಉತ್ತಮ ಕೆಲಸಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ರೂಪುಗೊಳ್ಳಲಿ’ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ಗುರುಮೂರ್ತಿ, “ಎಲ್ಲಾ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕು.” ಎಂದು ಹೇಳಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಂಘಟನಾ ಕಾರ್ಯದರ್ಶಿ ಮಕ್ಬುಲ್ ಭಾಷಾ, ‘ಮಕ್ಕಳಿಗೆ ಕೇವಲ ಪಠ್ಯವಲ್ಲದೆ ನೀತಿ ಶಿಕ್ಷಣ, ಮೌಲ್ಯಗಳು, ಸಂಸ್ಕೃತಿ, ಯೋಗ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಸಂಘಟನೆಯ ಕಾರ್ಯ ನಿಜಕ್ಕೂ ಸಂತೋಷದಾಯಕ.’ ಎಂದು ತಿಳಿಸಿದರು. ಪ್ರಮುಖರಾದ ಮಲ್ಲಮ್ಮ ವಡ್ಡರ್, ಸವಿತಾ, ಶೋಭಾ ಕುಮಾರಿ, ರೇಷ್ಮಾ, ಮಂಜುಳಾ, ಹುಸೇನ್ ಬಾಷಾ, ಹಿರಿಯರಾದ ನಾಗರಾಜ್, ಒಕ್ಕೂಟದ ಕಾರ್ಯದರ್ಶಿ ಕೊಟ್ರಯ್ಯ ಇದ್ದರು. ಶಿಕ್ಷಕಿ ಕವಿತಾ ಐ.ಜಿ. ಸ್ವಾಗತಿಸಿದರು. ಜಯಲಕ್ಷ್ಮಿ ನಿರೂಪಿಸಿದರೆ, ರೇಣುಕಾ ವಂದನೆ ಸಲ್ಲಿಸಿದರು.
Leave a comment