ಸತೀಶ ಜಾರಕಿಹೊಳಿ ಹೆಗಲಿಗೆ ಅಹಿಂದ ನಾಯಕತ್ವ

Sirisuddi Kannada
2 Min Read

ಬೆಂಗಳೂರು : ನಾಡಿನ ಅಹಿಂದ ಸಮುದಾಯಗಳ ನಾಯಕತ್ವವನ್ನು ಸಚಿವರಾದ ಸತೀಶ್ ಜಾರಕಿಹೊಳಿ ಯವರು ವಹಿಸಿಕೊಂಡು ಮುನ್ನಡೆಸಲು ಬೆಂಗಳೂರು ಗಾಂಧಿನಗರದ ಮೌರ್ಯ ಹೋಟೆಲ್ಲಿನಲ್ಲಿ ಶುಕ್ರವಾರ ಜರುಗಿದ  ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿ ಎಲ್ಲರ ಅಭಿಪ್ರಾಯ ಆಲಿಸಿದರು. ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾವಾರು ಸಂಘಟಕರಿಂದ ಪ್ರಸಕ್ತ ಜರುಗುತ್ತಿರುವ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತಾಗಿ ಜಿಲ್ಲಾ ವಾರು ಸಂಘಟಕರ ಅಭಿಪ್ರಾಯ ಸಂಗ್ರಹಣೆಗಾಗಿ ಕರೆಯಲಾಗಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಅಭಿಪ್ರಾಯ ಮತ್ತು ಸಲಹೆ ಹಾಗೂ ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಮೀತಿಯು ಪ್ರಮುಖ 6 ನಿರ್ಣಯಗಳನ್ನು ಕೈಗೊಂಡು ಅದರ ಸಾಕಾರಕ್ಕಾಗಿ ಶ್ರಮಿಸಲಿದೆ.

ನಾಡಿನ ಅಹಿಂದ ಚಳುವಳಿಯ ಪ್ರಮುಖರಾದ ದಾನಪ್ಪ ಕಬ್ಬೇರ್ ಡಾ. ಭೀಮಣ್ಣ ಮೇಟಿ, ಆದರ್ಶ ಯಲ್ಲಪ್ಪ, ನಿಂಗಪ್ಪ ಕುಂಬಾರ, ರಮೇಶ ಹೊದಿಗೆರೆ, ಚಂದ್ರಶೇಖರ್ ಜುಟ್ಟದ್, ತೋಳಿ ಭರಮಣ್ಣ, ದೇವಾನಂದ ನೇಕಾರ್, ಚಿದಾನಂದಪ್ಪ ಹೊಸಪೇಟೆ, ನರಸಿಂಹ ನಾಯಕ, ಚಾಮರಾಜನಗರ ರಫೀಕ್ ಅಹಮದ್, ಪ್ರಸಾದ್ ರೇವರೆಂಡ್, ಮಲ್ಲಿಕಾರ್ಜುನ ಕುಸ್ತಿ, ಗೋಪಾಲ್ ಮಡಿವಾಳ, ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬಹುತೇಕ 2005 ರ ಹುಬ್ಬಳ್ಳಿ ‘ಅಹಿಂದ’ ಸಮಾವೇಶದ ಹಿಂದಿದ್ದ ಪ್ರೇರಕ ಶಕ್ತಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದವು.  ಸಭೆಯ ನಂತರ ರಾಜ್ಯ ಸಂಚಾಲಕರುಗಳಾದ ಮಾವಳ್ಳಿ ಶಂಕರ್, ಎನ್ ಅನಂತನಾಯ್ಕ, ಕಾರ್ಯಕಾರಿ ಸಮಿತಿಯ ಮುಖಂಡರಾದ ಸುರೇಶ್ ಲಾತೂರ್, ಬಿ ಗೋಪಾಲ್, ಎಣ್ಣೇಗೆರೆ ವೆಂಕಟ, ರಮೇಶ್, ಇರ್ಫಾನ್ ಮುದಗಲ್ ಜಿಲ್ಲಾವಾರು ಅಭಿಪ್ರಾಯಗಳನ್ನು ಸಂಗ್ರಹಿಸಿ ನಿರ್ಣಯಗಳನ್ನು ಮಂಡಿಸಿ ಸಭೆಯ ಒಪ್ಪಿಗೆಯನ್ನು ಪಡೆದು ಅದನ್ನು ಅನುಷ್ಠಾನಗೊಳಿಸಲು ನೀಲನಕ್ಷೆ ತಯಾರಿಸುವುದಾಗಿ ನಿರ್ಧರಿಸಲಾಯಿತು.

ನಿರ್ಣಯಗಳು:

1. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷಾ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ, ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.

2. ಮುಖ್ಯಮಂತ್ರಿ ಸ್ಥಾನದಲ್ಲಿರುವ ಮಾನ್ಯ ಸಿದ್ದರಾಮಯ್ಯ ನವರನ್ನು ಯಾವುದೇ ಕಾರಣಕ್ಕೂ ಬದಲಾಯಿಸದೆ ಪೂರ್ಣ ಅವಧಿಯ ವರೆಗೆ ಮುಖ್ಯಮಂತ್ರಿ ಯಾಗಿ ಮುಂದುವರಿಸಬೇಕೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಗಮನ ಸೆಳೆಯುವ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವುದು.

3. ನಾಡಿನ ಶೋಷಿತ ಸಮುದಾಯಗಳು ಮಾನ್ಯ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇರಲಿವೆ ಎಂಬುದನ್ನು ಇನ್ನಷ್ಟು ಗಟ್ಟಿಯಾಗಿ ದೊಡ್ಡ ದನಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸುವಂತೆ ಮಾರ್ದನಿಸುವಂತೆ ಕಾರ್ಯಚಟುವಟಿಕೆ ವಿಸ್ತರಿಸುವುದು.

4. ನಾಡಿನ ಅಹಿಂದ ಸಮುದಾಯಗಳ ನಾಯಕತ್ವವನ್ನು ಮಾನ್ಯ ಸತೀಶ್ ಜಾರಕಿಹೊಳಿ ಯವರು ವಹಿಸಿಕೊಂಡು ಮುನ್ನಡೆಸಬೇಕೆಂದು ಒತ್ತಾಯಿಸಿ ಒಕ್ಕೊರಲ ನಿರ್ಣಯ ಮಾಡಲಾಯಿತು.

5. ರಾಜ್ಯವ್ಯಾಪಿ ಅಹಿಂದ, ಶೋಷಿತ ಸಮುದಾಯಗಳ ಜಿಲ್ಲಾ, ತಾಲ್ಲೂಕು ಮಟ್ಟದ ಸಂಘಟನೆ, ಜನಜಾಗೃತಿ ಕಾರ್ಯಕ್ರಮ ಗಳನ್ನು ಆಯೋಜಿಸುವುದು.

6. ಹೊಸ ವರ್ಷದ ಮಧ್ಯ ಭಾಗದಲ್ಲಿ ಶೋಷಿತ ಸಮುದಾಯಗಳನ್ನು ಒಂದುಗೂಡಿಸಿ, ದೇಶದ ಇತರೆ ರಾಜ್ಯಗಳ ಹಿಂದುಳಿದ ವರ್ಗಗಳನ್ನು, ದಲಿತ, ಬುಡಕಟ್ಟು, ಅಲ್ಪಸಂಖ್ಯಾತ ಹಾಗೂ ಅಲಕ್ಷಿತ ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರುಗಳ ಉಪಸ್ಥಿತಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸುವುದು.

Share This Article
Leave a Comment