ಹರಪನಹಳ್ಳಿ: ‘ಇಂದಿನ ದಿನಗಳಲ್ಲಿ ಮದುವೆಗಳು ಸರಳತೆಯ ಬದಲು ಆಡಂಬರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಇದು ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ. ಇಂತಹ ಅದ್ದೂರಿತನಕ್ಕೆ ಕಡಿವಾಣ ಬೀಳಬೇಕಿದೆ’ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ವರಸದ್ಯೋಜಾತ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ತೆಗ್ಗಿನಮಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 79ನೇ ಪುಣ್ಯಾರಾಧನೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಸಾಮೂಹಿಕ ವಿವಾಹಗಳು ಸನಾತನ ಪರಂಪರೆಯ ಪುನರ್ಜೀವನವಿದ್ದಂತೆ. ಇಲ್ಲಿ ನಡೆಯುವ ಮದುವೆಗಳು ಕುಟುಂಬಗಳ ಭವಿಷ್ಯದ ಸುಂದರ ಕನಸುಗಳಿಗೆ ಮುನ್ನುಡಿಯಾಗುತ್ತವೆ’ ಎಂದು ಅವರು ಆಶೀರ್ವದಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳ್ಳಾರಿ ಸಂಸದ ಇ. ತುಕಾರಾಂ ಮಾತನಾಡಿ, ‘ಸರ್ಕಾರ ಮಾಡಬೇಕಾದ ಅನೇಕ ಜನಪರ ಕಾರ್ಯಗಳನ್ನು ನಾಡಿನ ಮಠ-ಮಾನ್ಯಗಳು ಮಾಡುತ್ತಿರುವುದು ಶ್ಲಾಘನೀಯ’ ಎಂದರು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ‘ನವದಂಪತಿಗಳು ಪರಸ್ಪರ ಅರ್ಥಮಾಡಿಕೊಂಡು ಸುಖಿ ಜೀವನ ನಡೆಸಬೇಕು. ಅತ್ತೆ-ಮಾವಂದಿರನ್ನು ಸ್ವಂತ ತಂದೆ-ತಾಯಿಯಂತೆ ಕಂಡಾಗ ಮಾತ್ರ ಸಂಸಾರ ಸುಭದ್ರವಾಗಿರುತ್ತದೆ’ ಎಂದು ಹಾರೈಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಮಾತನಾಡಿ, ಕಣ್ಮರೆಯಾಗುತ್ತಿರುವ ಅವಿಭಕ್ತ ಕುಟುಂಬ ಪದ್ಧತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ 21 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಡಾ. ಟಿ.ಎಂ. ಜ್ಯೋತಿ ಕಿರಣ್ ಕುಮಾರ್ ಅವರಿಗೆ ‘ಪ್ರೇರಣಾದಾಯಕ ಮಹಿಳಾ ನಾಯಕಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಜ್ಯೋತಿಷಿ ರಾಜಣ್ಣ, ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಟಿ.ಎಂ. ವಿಶ್ವನಾಥ, ಎಚ್.ಎಂ. ಕೊಟ್ರಯ್ಯ, ಟಿ.ಎಂ. ಪ್ರತೀಕ್, ಟಿ.ಎಂ. ರಾಜಶೇಖರ, ಶಿರಬಿ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a comment