ಹರಪನಹಳ್ಳಿ: ಹೊಲದಲ್ಲಿ ಚಿನ್ನದ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ ನಾಲ್ವರು ವಂಚಕರನ್ನು ಸಿನಿಮೀಯ ರೀತಿಯಲ್ಲಿ ದೂರುದಾರರ ಸಹಕಾರದಿಂದ ಪೊಲೀಸರು ಬಂಧಿಸಿರುವ ಘಟನೆ ತಾಲ್ಲೂಕಿನ ನೀಲಗುಂದ ಕ್ರಾಸ್ ಬಳಿ ಶನಿವಾರ ಜರುಗಿದೆ.
ತಾಲ್ಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಪ್ರತಾಪ್ (26), ಕವಾಡಿ ಲಕ್ಷ್ಮಣ (60), ಆರ್.ಕೆ ಯಶವಂತ್ (22),ಕವಾಡಿ ಸಂತೋಷ್ (23) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸತೀಶ (18 ) ತಲೆಮರೆಸಿಕೊಂಡವ. ಬಂಧಿತರಿಂದ ನಕಲಿ ಬಿಲ್ಲೆಗಳು, ಒಂದು ಅಸಲಿ ಬಂಗಾರದ ಬಿಲ್ಲೆ ಹಾಗೂ 2,000 ರೂಪಾಯಿ ನಗದು ಜಫ್ತಿ ಮಾಡಲಾಗಿದೆ.
ಮೈಸೂರು ಜಿಲ್ಲೆಯ ಸಾಲಿಗ್ರಾಮದ ನಿವಾಸಿ ರವಿಕುಮಾರ್ ಎಂಬುವವರ ಮೊಬೈಲ್ಗೆ ಕರೆ ಮಾಡಿದ್ದ ಅಪರಿಚಿತರು, ತಮಗೆ ಜಮೀನಿನಲ್ಲಿ ಬಂಗಾರದ ಬಿಲ್ಲೆಗಳಿರುವ ಮಡಕೆ ಸಿಕ್ಕಿದೆ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದರು. ನಮಗೆ ಹಣದ ತುರ್ತು ಅಗತ್ಯವಿದೆ, ಯಾರಿಗೆ ಮಾರಿದರೂ ನಮಗೆ ಕಡಿಮೆ ಬೆಲೆ ಸಿಗುತ್ತದೆ.
ಆದ್ದರಿಂದ ನಿಮಗೇ ಕೇವಲ 10 ಲಕ್ಷ ರೂಪಾಯಿಗೆ ಇದನ್ನು ಕೊಡುತ್ತೇವೆ ಎಂದು ನಂಬಿಸಲು ಯತ್ನಿಸಿದ್ದರು. ಆದರೆ, ಇದು ವಂಚನಾ ಜಾಲ ಇರಬಹುದು ಎಂದು ಮೊದಲೇ ಶಂಕಿಸಿದ ರವಿಕುಮಾರ್ ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿ ವಿಜಯಲಕ್ಷ್ಮಿ ಅವರಿಗೆ ತಿಳಿಸಿ, ಅವರೊಟ್ಟಿಗೆ ವಂಚಕರನ್ನು ಹಿಡಿಯಲು ಯೋಜನೆ
ರೂಪಿಸಿದ್ದರು.
ದಿನಾಂಕ 04-07-2026 ರಂದು ಬೆಳಗ್ಗೆ 7:15 ರ ಸುಮಾರಿಗೆ ನೀಲಗುಂದ ಕ್ರಾಸ್ ಹತ್ತಿರವಿರುವ ಪೆಟ್ರೋಲ್ ಬಂಕ್ ಬಳಿ ಬಂಗಾರದ ಬಿಲ್ಲೆಯನ್ನು ಪರೀಕ್ಷಿಸಲು ವಂಚಕರು ನಂಬಿಕೆ ಹುಟ್ಟಿಸಲು ಒಂದು ಅಸಲಿ ಬಂಗಾರದ ಬಿಲ್ಲೆಯನ್ನು ಮಾದರಿಗಾಗಿ ನೀಡಿದ್ದರು. ರವಿಕುಮಾರ್ ಅವರು ಸಹ ತಮ್ಮ ಬಳಿ ಮುಂಗಡವಾಗಿ ನೀಡಲು 2,50,000 ರೂ. ಹಣ ತಂದಿರುವುದಾಗಿ ತೋರಿಸಿದ್ದರು.
ತದನಂತರ ಸಂಜೆ 5:00 ಗಂಟೆ ಸುಮಾರಿಗೆ ಆರೋಪಿಗಳು ಕೆಎ-27 ಜೆಡ್-8231 ಮತ್ತು ಕೆಎ-17 ಎಂಸಿ-8325 ನೋಂದಣಿ ಸಂಖ್ಯೆಯ ಕಾರುಗಳಲ್ಲಿ ಬಂದು ನಕಲಿ ಬಂಗಾರ ನೀಡಿ ವಂಚಿಸಲು ಯತ್ನಿಸಿದಾಗ, ಮಫ್ತಿಯಲ್ಲಿದ್ದ ಪೊಲೀಸರು ಸಿನಿಮಾ ರೀತಿಯಲ್ಲಿ ಚೇಸಿಂಗ್ ಮಾಡಿ ನಾಲ್ವರು ಆರೋಪಿಗಳನ್ನು ಸೆರೆ ಹಿಡಿದು ವಂಚನೆ ಜಾಲ ಬಯಲು ಮಾಡಿದ್ದಾರೆ. ವಂಚನೆ ಜಾಲ ಪತ್ತೆ ಹಚ್ಚುವಲ್ಲಿ ಪೊಲೀಸರು ಸಹಕರಿಸಿದ್ದಾರೆ ಎಂದು ದೂರುದಾರ ರವಿಕುಮಾರ್ ಪ್ರತಿಕ್ರಯಿಸಿದರು.
Leave a comment