ಹರಪನಹಳ್ಳಿ: “ಪರಿಸರ ಜಾಗೃತಿ ಎಂದರೆ ಕೇವಲ ಭಾಷಣ ಮಾಡುವುದಲ್ಲ; ಪ್ರಕೃತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ನಮ್ಮ ದಿನನಿತ್ಯದ ಬದುಕಿನಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು,” ಎಂದು ಹಾರಕನಾಳ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಅವರು ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಹಾರಕನಾಳು ಗ್ರಾಮದ ಸರಕಾರಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಹೆಚ್ಚಾಗುತ್ತಿರುವ ಕೈಗಾರೀಕರಣ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನದಂತಹ ದೊಡ್ಡ ಸವಾಲುಗಳಿಗೆ ಸಾರ್ವಜನಿಕರಲ್ಲಿ ಮೂಡುವ ಜಾಗೃತಿಯೇ ನಿಜವಾದ ಪರಿಹಾರ ಎಂದರು.
ವಿದ್ಯಾರ್ಥಿಗಳೇ ಹಸಿರು ಸೇನೆ!
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಮೇಲ್ವಿಚಾರಕ ಮಂಜುನಾಥ್ ಮಾತನಾಡಿ, ಪರಿಸರ ಉಳಿಸುವಲ್ಲಿ ಯುವಜನರ ಮತ್ತು ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ. ಶಾಲೆ ಹಾಗೂ ಮನೆಯ ಸುತ್ತಮುತ್ತ ಗಿಡ ನೆಡುವುದು ಮತ್ತು ಸ್ವಚ್ಛತಾ ಅಭಿಯಾನಗಳನ್ನು ಮಾಡುವ ಮೂಲಕ ಮಕ್ಕಳು ಪರಿಸರ ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.
ಶಿಕ್ಷಕ ಶಿವಮೂರ್ತಿಪ್ಪ ಅವರು ನೀಡಿದ ಪರಿಸರ ಸೂತ್ರಗಳು:
ಸಾಲುಮರದ ತಿಮ್ಮಕ್ಕ ಅವರಂತಹ ಪರಿಸರವಾದಿಗಳನ್ನು ಆದರ್ಶವಾಗಿಟ್ಟುಕೊಂಡು ಗಿಡಮರ ಬೆಳೆಸುವುದು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು. ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡುವುದು.ಮಳೆ ನೀರು ಕೊಯ್ಲು ಹಾಗೂ ಇಂಗು ಗುಂಡಿಗಳ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು.
ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಬಳಸಿ, ವಿದ್ಯುತ್ ಮಿತವಾಗಿ ಬಳಸುವುದು. ಮಕ್ಕಳಿಗಾಗಿ ಸ್ಪರ್ಧೆ, ಗಿಡ ನಾಟಿ ಇದೇ ಸಂದರ್ಭದಲ್ಲಿ ಪರಿಸರದ ಕುರಿತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿಶೇಷ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ಆವರಣದಲ್ಲಿ ಎಲ್ಲರೂ ಸೇರಿ ಹಸಿರು ಸಸಿಗಳನ್ನು ನೆಟ್ಟು ನೀರೆರೆದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ವೀರಯ್ಯ, ಶ್ವೇತಾ, ಸಲ್ಮಾ, ಜಮಾಲ್, ಬಿ.ಗೌರಮ್ಮ, ಜೆ.ವಿಜಯಬಾಯಿ, ಸುನೀತಾ. ಎಂ, ವಲಯ ಮೇಲ್ವಿಚಾರಕರಾದ ರಾಧಾ, ಸೇವಾ ಪ್ರತಿನಿಧಿ ಶಾಂತಮ್ಮ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಸಡಗರದಿಂದ ಪಾಲ್ಗೊಂಡಿದ್ದರು.
Leave a comment