ಹರಪನಹಳ್ಳಿ : ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಉಡುಸಲಾಂಬಿಕ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ, ಸಂಭ್ರಮದಿಂದ ಜರುಗಿತು.
ಹಬ್ಬದ ನಿಮಿತ್ತ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ದೇವಿಯ ಕಟೌಟ್ಗಳು ರಾರಾಜಿಸಿದವು. ಎಲ್ಲ ಪ್ರಮುಖ ರಸ್ತೆಗಳಿಗೂ ವಿದ್ಯುತ್ ದೀಪಾಲಂಕಾರ ಅಳವಡಿಸಲಾಗಿತ್ತು. ಬೆಳಿಗ್ಗೆ ಉಡುಸಲಾಂಭಿಕ ದೇವಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ, ಭಾಜ ಭಜಂತ್ರಿ, ಸಮ್ಮಾಳ, ನಂದಿಕೋಲು, ಡೊಳ್ಳು, ಹಲಗೆ, ರುಮ್ಮಿ ವಾದ್ಯಗೋಷ್ಟಿಯಲ್ಲಿ ಮೆರವಣಿಗೆ ಮೂಲಕ ದೇವಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಘಟ್ಟಿ ಸ್ಥಾಪಿಸಲಾಯಿತು. ಬುಧವಾರ ರಾತ್ರಿ ರಸಮಂಜರಿ, ಗುರುವಾರ ಸಂಜೆ 4ಕ್ಕೆ ಉಲುಸು ಹೊಡೆಯುವ ಕಾರ್ಯಕ್ರಮ ಜರುಗಲಿದೆ. ಶುಕ್ರವಾರ ರಾತ್ರಿ 10ಕ್ಕೆ ರಕ್ತರಾತ್ರಿ ಪೌರಾಣಿಕ ನಾಟಕ ಆಯೋಜಿಸಲಾಗಿದೆ. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
