ಲಾಲಯೇತ್ ಪಂಚವರ್ಷಾಣಿ.
ದಶವರ್ಷಾಣಿ ತಾಡಯೇತ್.
ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್.
ಇದೊಂದು ಸಂಸ್ಕೃತ ಶ್ಲೋಕ. ಇ ಮಕ್ಕಳನ್ನು ಐದು ವರ್ಷ ಲಾಲನೆ ಪಾಲನೆ ಮಾಡಿ ಪ್ರೀತಿ ಕೊಡಬೇಕು. ಇನ್ನು ಹತ್ತು ವರ್ಷ ದಂಡಿಸಬೇಕು. 16 ವರ್ಷದ ನಂತರ ಸ್ನೇಹಿತರಂತೆ ಕಾಣಬೇಕು ಎಂದು ಹೇಳುತ್ತದೆ.
ಮಕ್ಕಳು ಉದ್ಯಾನವನದಲ್ಲಿರುವ ಮೊಗ್ಗುಗಳಂತೆ, ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು. ಯಾಕೆಂದರೆ ಅವರು ಭಾರತದ ಭವಿಷ್ಯದ ಪ್ರಜೆಗಳು ಎಂದು ಚಾಚಾ ನೆಹರುರವರು ಈ ಸುಂದರ ಸಾಲುಗಳನ್ನು ಹೇಳುತ್ತಾರೆ. ಮಕ್ಕಳನ್ನು ಮತ್ತೊಬ್ಬರಿಗೆ ಹೋಲಿಸಬೇಡಿ. ಸೂರ್ಯ ಚಂದ್ರರು ಕೂಡ ಅವರವರ ಸಮಯ ಬಂದಾಗ ಬೆಳಕನ್ನು ಚೆಲ್ಲುತ್ತಾರೆ.
ಮಕ್ಕಳು ಎಂದರೆ ದೇವರ ಸಮಾನ
ಮಕ್ಕಳು ಎಂದರೆ ದೇವರ ಸಮಾನ. ಮಕ್ಕಳು ದೇವರು ಇದ್ದ ಹಾಗೇ. ಎಂಬೆಲ್ಲಾ ಮಾತುಗಳಿವೆ. ನಿಜ ಮಕ್ಕಳ ಮನಸ್ಸು ನಿಷ್ಕಲ್ಮಶ, ಪರಿಶುದ್ಧ, ಪವಿತ್ರ. ಹಿಂದೆ ನಮ್ಮ ಪೂರ್ವಿಕರು ಮಕ್ಕಳಿರಲವ್ವ ಮನೆ ತುಂಬ. ಒಪ್ಪೋತ್ತಿಗೆ ಇಪ್ಪತ್ತು ಮಕ್ಕಳಾಗಲಿ. ತುತ್ತಿಗೊಂದೊಂದು ಹ ಮುತ್ತು ಹುಟ್ಟಲಿ. ಅಷ್ಟ ಪುತ್ರಿ- ಪುತ್ರ ಸೌಭಾಗ್ಯವತಿ ಎಂದೆಲ್ಲಾ ಆಶೀರ್ವದಿಸುತ್ತಿದ್ದರು. ಆದರೆ ಇಂದು ನಾವಿಬ್ಬರು ನಮಗಿಬ್ಬರು, ನಾವಿಬ್ಬರು ನಮಗೊಬ್ಬರು, ನಾವಿಬ್ಬರು ನಮಗ್ಯಾರು ಬೇಡ, ಕೊನೆಗೆ ನನಗೆ ನೀನು ಬೇಡ, ನಿನಗೆ ನಾನು ಬೇಡ*ಅನ್ನೋ ಲೆಕ್ಕಕ್ಕೂ ಬಂದಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಅಪ್ಪ-ಅಮ್ಮ ಜೊತೆಗಿದ್ದರೆ ಜಾಯಿಂಟ್ ಫ್ಯಾಮಿಲಿ, ಬೇರೆ- ಬೇರೆ ಇದ್ದರೆ ಡಿವೈಡ್ ಫ್ಯಾಮಿಲಿ. ಪೋಷಕರಿಬ್ಬರೂ ಸಮಾನ ಉದ್ಯೋಗದಲ್ಲಿದ್ದು ,ಸಮಾನ ವೇತನ ಪಡೆದು ತಮ್ಮ ಪ್ರಗತಿಯ ಚಾಪನ್ನು ಸಮಾಜದಲ್ಲಿ ಮೂಡಿಸುವ ಬರದಲ್ಲಿ ಸಂಸಾರದ ಮಹತ್ವ ಮರೆಯುತ್ತಿದ್ದಾರೆ. ಈಗಂತೂ ಮೊಬೈಲ್, ಲ್ಯಾಪ್ ಟಾಪ್ ,ಕಂಪ್ಯೂಟರ್ ಇನ್ನಷ್ಟು ಹಾಳು ಮಾಡುತ್ತಿದೆ.
ನಾವು ಎಷ್ಟೇ ಆಧುನಿಕತೆಯ, ಡಿಜಿಟಲ್, ಕೃತಕ ಜೀವನ ನಡೆಸಿದರೂ ನಮ್ಮ ಆಚಾರ, ವಿಚಾರ, ರೂಢಿ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಸಭ್ಯ ನಡೆ-ನುಡಿಗಳನ್ನು ಕಡೆಗಣಿಸಬಾರದು. ಆಕಾಶದಲ್ಲಿ ನಾವು 2- 3 ಗಂಟೆ ವಿಮಾನದಲ್ಲಿ ಹಾರಾಡಬಹುದು. ಸಮುದ್ರದಲ್ಲಿ 3 ದಿನ ಪ್ರಯಾಣಿಸಬಹುದು. ಮತ್ತೆ ಕೆಳಗೆ ಬರಲೇಬೇಕು. ಭೂಮಿ ಮೇಲೆಯೇ ನಡಿಬೇಕು. ಭೂಮಿ ಮೇಲೆಯೇ ಮಲಗಬೇಕು. ಅದರಂತೆಯೇ ನಾವು ಟೊಮೆಟೊ, ಮೆಣಸಿನಕಾಯಿಯನ್ನು ಭೂಮಿಯಲ್ಲಿ ಬೆಳೆಯಬೇಕು. ಯಾವುದೋ ಕಾರ್ಖಾನೆಯಲ್ಲಿ ಟೊಮೆಟೊ, ಮೆಣಸಿನಕಾಯಿ ಬೆಳೆಯಲು ಸಾಧ್ಯವಿಲ್ಲ.
ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು
ಈಗ ವಿಷಯಕ್ಕೆ ಬರೋಣ ಬೆಳೆಯುವ ಮಕ್ಕಳನ್ನು ಪೋಷಕರು ಸ್ನೇಹಿತರಂತೆ ಕಾಣಬೇಕು. ಯಾಕೆಂದರೆ ಮಕ್ಕಳಿಗೆ ನಾವು ಯಾವ ವಾತಾವರಣ ಕಲ್ಪಿಸಿರುತ್ತೇವೆಯೋ ಹಾಗೆ ಮಗುವಿನ ವ್ಯಕ್ತಿತ್ವ ರೂಪಗೊಳ್ಳುತ್ತದೆ.ಉದಾ-ಒಂದೇ ತಾಯಿಯ ಎರಡು ಗಿಳಿಮರಿಗಳು ಅಗಲಿ ಒಂದು ಕಟುಕರ ಗುಂಪಿಗೆ, ಇನ್ನೊಂದು ಸಾಧು-ಸಂತರ ಗುಂಪಿನಲ್ಲಿ ಬೆಳೆಯುತ್ತವೆ. ಕಟುಕರ ಗುಂಪಿನಲ್ಲಿದ್ದ ಗಿಳಿಮರಿ ಯಾರಾದರನ್ನು ಕಂಡ ತಕ್ಷಣ ಯಾರೋ ಬಂದರು ಅವರನ್ನು ಹಿಡಿಯಿರಿ ,ಹೊಡೆಯಿರಿ ಎನ್ನುತ್ತದೆ. ಅದೆ ಸಾಧುಸಂತರ ಸಹವಾಸದಲ್ಲಿ ಬೆಳೆದ ಗಿಳಿ ಬನ್ನಿ ಆಯಾಸವೇ, ಕ್ಷೇಮವಾಗಿದ್ದೀರಾ ,ಕುಳಿತುಕೊಳ್ಳಿ ಕುಡಿಯಲು ತಿನ್ನಲು- ನೀರು ಆಹಾರ ಕೊಡುವುದು. ಅಂತೆಯೇ ಮಗುವಿನ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ ನಾವು ಏನು ಗೀಚುತ್ತೇವೊ ಅದು ಮಗುವಿನ ಮನಸಲ್ಲಿ ಮೂಡುತ್ತದೆ.
ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿ ಬಾಲ್ಯದಲ್ಲಿ ನಾಯಕನ ಗುಣಗಳನ್ನು ಕಲಿಸಿದ್ದಕ್ಕೆ ಮಹಾರಾಜನಾದನು. ಮೌಂಟ್ ಎವರೆಸ್ಟ್ ಏರಿದ ಮೊದಲ ಮಾನವ ತೇನಸಿಂಗನ ತಾಯಿ ಮಗು ಇದು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿಖರ ಇದನ್ನು ಇಲ್ಲಿ ತನಕ ಯಾರು ಹತ್ತಿಲ್ಲ ನೀನು ಹತ್ತಬಲ್ಲೆ ಎಂದು ಹೇಳಿದ್ದಕ್ಕೆ ತೇನ್ ಸಿಂಗ್ ಎವರೆಸ್ಟ್ ಏರಿದ. ಸಮಾಜದ ಅವಸ್ಥೆಯಿಂದ ಬಾಲ್ಯದಲ್ಲಿ ಬೇಸತ್ತ ಭೀಮರಾವ್ ಸಂವಿಧಾನ ರಚಿಸಿ ವ್ಯವಸ್ಥೆ ಸುಭಿಕ್ಷೆಗೊಳಿಸಿ ಅಂಬೇಡ್ಕರಾದ . ಹಾಗೆಯೇ ನಾವು ಕೂಡ ಮಕ್ಕಳಿಗೆ ಮನೆ, ಬಂಗಲೆ, ಹಣ, ಆಸ್ತಿ, ಚಿನ್ನ ಕೂಡಿಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡೋಣ. ಭತ್ತ ತುಂಬುವ ಚೀಲಗಳನ್ನಾಗಿ ಮಾಡದೆ, ಭತ್ತ ಬೆಳೆಯುವ ಗದ್ದೆಗಳನ್ನಾಗಿ ಮಾಡೋಣ. ಮೀನು ತಿನ್ನುವುದನ್ನು ಕಲಿಸುವುದಕ್ಕಿಂತ ಹಿಡಿಯುವುದನ್ನು ಕಲಿಸೋಣ ಅವರ ಬಾಲ್ಯವನ್ನು ಅನುಭವಿಸಲು ಬಿಡಿ ಅದನ್ನು ಕಸಿದುಕೊಳ್ಳಬೇಡಿ.ಮೊದಲು ಊಟ, ನಂತರ ಆಟ, ಆಮೇಲೆ ಪಾಠ. ಅಂದರೆ ಮೊದಲು ದೈಹಿಕ ಆರೋಗ್ಯ ಹಾಗೂ ಸಬಲತೆ, ನಂತರ ಮಾನಸಿಕ ಸಬಲತೆ, ಆನಂತರ ಅಕ್ಷರ ಸಂಪಾದನೆ. ಮಕ್ಕಳನ್ನು ಸೀಮಿತ ಪರಿಮಿತಿಯಲ್ಲಿ ಬೆಳೆಸುವುದು ಬೇಡ. ವ್ಯಾಪಕವಾಗಿ ಬೆಳೆಸೋಣ ನಾನು, ನಮ್ಮವರು, ನನ್ನ ಸಮಾಜ ,ನನ್ನ ದೇಶ , ಎಂಬುದನ್ನ ಕಲಿಸಿ.
‘ಆಡಿ ಬಾ ಎನ ಕಂದ. ಅಂಗಾಲ ತೊಳೆದೇನು.
ತೆಂಗಿನ ಕಾಯಿ ತಿಳಿ ನೀರು ತಕ್ಕೊಂಡು.
ನಿನ್ನ ಬಂಗಾರ ಮೋರಿ ತೊಳೆದೇನು’
ಈಗಿನ ತಾಯಿ ಆಡಿ ಬಾ ನಿನ್ನ ಕಾಲು ಮುರಿತೀನಿ ಅಂತಾಳೆ. ಮಕ್ಕಳಿಗೆ ಗುರು ಹಿರಿಯರನ್ನ ಗೌರವಿಸುವುದು, ಸಮಾನರನ್ನು ಚಿಕ್ಕವರನ್ನ ಪ್ರೀತಿಸುವುದು. ಪ್ರಾಣಿ ಪಕ್ಷಿಗಳಿಗೆ ದಯೆ ತೋರಿಸುವುದು. ಪರಿಸರ ಸಂರಕ್ಷಣೆ ಕಲಿಸಬೇಕು.
ಮಕ್ಕಳು ಹದಿಹರೆಯದ ವಯಸ್ಸಿನಲ್ಲಿರುವಾಗ ಅವರಲ್ಲಿ ದೈಹಿಕ ,ಮಾನಸಿಕ ಸಾಕಷ್ಟು ಬದಲಾವಣೆಗಳಾಗುತ್ತವೆ. ಆಗ ತಂದೆ ತಾಯಿಗಳು ಸರಿಯಾದ ಮಾರ್ಗದರ್ಶನ ನೀಡಿ ಗೊಂದಲಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಟೀನೇಜ್ ಅಲ್ಲಿ ಅವರ ಮನಸ್ಸು ಮಂಗನಂತಿರುತ್ತದೆ. ಸೂಕ್ಷ್ಮವಾಗಿ ನಿಭಾಯಿಸಿ ತಿಳಿ ಹೇಳಬೇಕು. ಕನಿಷ್ಠ ಹತ್ತನೇ ತರಗತಿ ಪಿಯುಸಿ ಓದುವತನಕ ತಂದೆ ತಾಯಿಗಳು ಮಕ್ಕಳ ಜೊತೆಗೆ ಇರಬೇಕು. ಸ್ವಂತ ಬುದ್ಧಿ, ಸ್ವಾವಲಂಬನೆ ನಿರ್ದಿಷ್ಟ ಗುರಿ ಕಂಡುಕೊಳ್ಳುವ ತನಕ ಜೊತೆಗೆ ಇದ್ದರೆ ಉತ್ತಮ. ಹಾಗಂತ ಜೊತೆ ಇಲ್ಲದ ಮಕ್ಕಳೆಲ್ಲ ಹಾಳಾಗಿ ಹೋಗಿದ್ದಾರೆ ಎಂದಲ್ಲ. ನಾವೆಲ್ಲ ತಂದೆ-ತಾಯಿಗಳಿಂದ ದೂರವಿದ್ದೆ ಜೀವನ ರೂಪಿಸಿಕೊಂಡವರು.ನಾವು ಮಗು ನಾಳೆ ಏನಾಗುತ್ತದೆ. ಎಂದು ಸದಾ ಚಿಂತಿಸುತ್ತೇವೆ. ಆದರೆ ಅವರ ಇಂದಿನ ದಿನವನ್ನು ಮತ್ತು ಅವರು ಇಂದು ಏನಾಗಿದ್ದಾನೆ ಎಂಬುದನ್ನು ಮರೆಯುತ್ತೇವೆ. ಹೆತ್ತವರು ಮೊದಲು ಮಕ್ಕಳಾಗಬೇಕು. ಅದು ಬಿಟ್ಟು ನಮ್ಮ ಸ್ಥಾನಮಾನಗಳಿಗೆ ನಾವು ಅಂಟಿಕೊಳ್ಳುವುದಾದರೆ, ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಒತ್ತಡ ಹೇರುವುದು ತಪ್ಪು. ಮಗುವನ್ನ ಓಡಿಸಿ ಓಡಿಸಿ ಅವನು ನಿಜವಾಗಲೂ ಓಡುವ ಸಮಯದಲ್ಲಿ ಮುಗ್ಗರಿಸಿ ಬೀಳುತ್ತಾನೆ. ಮೌಲ್ಯಗಳನ್ನ ಮಾಡಿ ತೋರಿಸಬೇಕು. ಹೇಳಿ ಮಾಡಿಸಿದರೆ ಮಾಡಲ್ಲ.
Never use bad words in front of childrens.
Never fight in front of childrens. Don’t ask your son to go on moon. You go first and invite him. If you want your children to be honest we have to honest. If you want your child to be truthfull you have to be truthfull
ಅಂದರೆ ಮಕ್ಕಳ ಮುಂದೆ ಕೆಟ್ಟ ಪದಗಳ ಆಡುವುದು. ಜಗಳ ಮಾಡುವುದು. ಚಂದಿರನನ್ನ ತೋರಿಸಿ , ನೀನು ಅಲ್ಲಿಗೆ ಹೋಗು ಎನ್ನುವುದು. ಮೊದಲು ನಾವು ಚಂದ್ರನಲ್ಲಿಗೆ ಹೋಗಿ ನಮ್ಮ ಮಗುವನ್ನು ಕರಿಯಬೇಕು.
ಮೊದಲು ನಾವು ಸತ್ಯವನ್ನು ಮಾತಾಡಿ. ಸತ್ಯವನ್ನ ಮಾತನಾಡಲು ಕಲಿಸಬೇಕು.
- ಲೇಖಕರು
- ಶ್ರೀಮತಿ ಮಲ್ಲಮ್ಮ ತಿರುಪತಿ ವಡ್ಡರ
- ಕನ್ನಡ ಭಾಷಾ ಸಹಶಿಕ್ಷಕರು, ಸರ್ಕಾರಿ ಆದರ್ಶ ವಿದ್ಯಾಲಯ
- ಅನಂತನಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ.
Leave a comment