ಹರಪನಹಳ್ಳಿ : ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ವಿವೇಕಾನಂದ ದೊಡ್ಮನಿ ಅವರ ಮರ್ಯಾದೆ ಹತ್ಯೆ ಖಂಡಿಸಿ ಅಂಬೇಡ್ಕರ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತಾಲ್ಲೂಕು ಆಡಳಿತ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಅವಳಿ ಕೊಲೆ ಮಾಡಿದ 6 ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಉಳಿದ 8 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ, ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಾದಿಗ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ಲಿಂಗಾಯತ ಜನಾಂಗದ ಮಾನ್ಯ ಪಾಟೀಲ್ ಅವರು ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದರು. ಆ ಮದುವೆಯಾಗಿ 7 ತಿಂಗಳು ಗರ್ಭಿಣಿ ಆಗಿದ್ದಾಗ ಆಕೆಯ ಮನೆಯವರು ಮರ್ಯಾದೆ ಹತ್ಯೆ ಮಾಡಿ, ಆಕೆ ಮತ್ತು ಮಗುವನ್ನು ಕೊಂದು ಹಾಕಿದ್ದಾರೆ. ಮಾನವ ಕುಲಕ್ಕೆ ಅಘಾತ ನೀಡಿರುವ ಇಂತಹ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗರ್ಭಿಣಿ ಮಾನ್ಯಳಿಗೆ ತಾಯಿಕಾರ್ಡ್ ಮಾಡುವ ಸಂದರ್ಭದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ತುಂಬಾ ತೊಂದರೆ ಕೊಟ್ಟಿದ್ದಾರೆ. ಆ ಗ್ರಾಮದ ಆಡಳಿತಾಧಿಕಾರಿಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡಲು ನಿರಾಕರಿಸಿದ್ದಾರೆ. ಇಂತಹ ಚಿತ್ರಹಿಂಸೆಯ ಜೊತೆ ಬದುಕುತ್ತಿದ್ದ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿದೆ. ಮಾನ್ಯಗಳನ್ನು ಕಳೆದುಕೊಂಡಿರುವ ಆಕೆಯ ಪತಿ ವಿವೇಕಾನಂದನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಮಾನ್ಯ ಮರ್ಯಾದೆ ಹತ್ಯೆ ವಿಶೇಷ ಕಠಿಣ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಮಾರುತಿ, ಕಾನೂನು ಸಲಹೆಗಾರ ಎಸ್.ಗೋಣೆಪ್ಪ, ವಸಂತ್ ಬಿ, ಎನ್.ಸಂಜೀವಪ್ಪ, ವಿ.ಮಲ್ಲಿಕಾರ್ಜುನ, ಪಕ್ಕೀರಪ್ಪ ಮೈದೂರು, ಎಸ್.ಪ್ರಭಾಕರ, ಎಚ್.ಪರಶುರಾಮ್, ಜಗದೀಶ ಪೂಜಾರ ಇದ್ದರು.
