ತುಂಗಭದ್ರಾ ತಟದಲ್ಲಿ ವಿಜೃಂಭಿಸಿದ ‘ಜಾನಪದ ಸಂಕ್ರಾಂತಿ’

Sirisuddi Kannada
2 Min Read

ಹರಪನಹಳ್ಳಿ : ತಾಲ್ಲೂಕಿನ ತಾವರಗುಂದಿ ಗ್ರಾಮ ಸಮೀಪ ತುಂಗಭದ್ರಾ ನದಿ ತೀರದಲ್ಲಿ ಸಂಕ್ರಾಂತಿ ಪ್ರಯುಕ್ತ ಗುರುವಾರ ಜರುಗಿದ ಮಕರ ಸಂಕ್ರಮಣ ಔತಣಕೂಟ ಮತ್ತು ಜಾನಪದ ಸಂಕ್ರಾಂತಿ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಎಂ.ಪಿ.ರವೀಂದ್ರ ಪ್ರತಿಷ್ಠಾನ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಜಾನಪದ ಸಂಕ್ರಾಂತಿ ವೇದಿಕೆಯಲ್ಲಿ ಕಲಾವಿದರಾದ ಕುಮಾರ ಪತ್ತರ್ ಹಾಗೂ ಪ್ರಸಿದ್ದ ಜಾನಪದ ಗಾಯಕಿ ಸವಿತಕ್ಕ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ ಜಾನಪದ ಹಾಡುಗಳಿಗೆ ನೆರೆದವರು ತಲೆತೂಗಿದರು. ಸ್ಥಳೀಯ ಕಲಾವಿದ ನಾಗಪ್ಪ, ಅಂಧ ಬಾಲಕಿ ಸಿಂಚನಾ ಅವರು ಸಹ ಗಾಯನ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಡೋಲಕ್ ತಂಡ, ಬಾಗಳಿ ಕೋಲಾಟ ಕಲಾವಿದರು ಸಹ ಕೋಲಾಟ ನುಡಿಸಿ ಜಾನಪದ ಸಂಕ್ರಾಂತಿಯ ಮೆರಗು ಹೆಚ್ಚಿಸಿದರು.

ಸಂಕ್ರಾಂತಿ ಪ್ರಯುಕ್ತ ಬಣ್ಣಗಳಿಂದ ಅಲಂಕೃತ ಎತ್ತಿನ ಬಂಡಿಗಳು, ಮಡಕೆ, ತೆಂಗಿನಗರಿ, ಕಬ್ಬು ಬೆಳೆ ಗಿಡಗಳಿಂದ ರಚಿಸಲಾಗಿದ್ದ ಹಳ್ಳಿಯ ಸೊಗಡಿನ ಚಿತ್ತಾರ ಗಮನ ಸೆಳೆಯಿತು. ಜುಳು ಜುಳು ಹರಿಯುತ್ತಿದ್ದ ನದಿಗಿಳಿದು ಸ್ನಾನ ಮಾಡಿದ ಜನರು ಹಬ್ಬವನ್ನು ಸಂಭ್ರಮಿಸಿದರು.  ಔತಣಕ್ಕೆ ಆಗಮಿಸಿದ್ದ ಜನರಿಗೆ ಶಾಸಕಿ ಎಂ.ಪಿ.ಲತಾ ಅವರು ಎಳ್ಳು ಬೆಲ್ಲ ವಿತರಿಸಿ, ಮಹಿಳೆಯರಿಗೆ ಉಡಿ ತುಂಬಿ ಶುಭಹಾರೈಸಿದರು.  ಔತಣಕೂಟದಲ್ಲಿ ಭಾಗಿಯಾಗಿದ್ದ ಸಾವಿರಾರು ಜನರು ರೊಟ್ಟಿ, ಚಟ್ನಿ, ಮೊಸರು, ಹೋಳಿಗೆ, ಮೈಸೂರುಪಾಕ್, ಕಾಳು, ಮೆಣಸಿನ ಪಲ್ಲೆ, ಬುತ್ತಿ, ಅನ್ನ, ಸಾರು ಸವಿದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಉದ್ಘಾಟಿಸಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು, ಸಂಕ್ರಾಂತಿ ಆಚರಣೆ ವಿಭಿನ್ನವಾಗಿ ಮಾಡುತ್ತಿರುವ ಲತಾಕ್ಕ ಅವರು ಜನಪ್ರಿಯತೆ ಗಳಿಸಿದ್ದಾರೆ ಎಂದರು.

ನದಿಯಲ್ಲಿ ಗಂಗಾಪೂಜೆ ನೆರವೇರಿಸಿದ  ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು, ನನ್ನ ಸಹೋದರ ಎಂ.ಪಿ.ರವೀಂದ್ರ ತಾಲ್ಲೂಕಿಗೆ 371ಜೆ ಸೌಲಭ್ಯದ ಜೊತೆ ಹಲವು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರೇ ಆರಂಭಿಸಿದ್ದ ಜಾನಪದ ಸಂಕ್ರಾಂತಿ ನಾವು 8 ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ ಎಂದು ಹೇಳಿದರು. ಇದೇ ವೇಳೆ ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಹೊನ್ನಾಳಿ ಶಾಸಕ ಡಿ.ಜೆ.ಶಾಂತನಗೌಡ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್, ಹುಡಾ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಕೀರ್ತಿ ಕುಮಾರ, ಎಚ್.ಎಂ.ಗೌತಮ್ ಪ್ರಭು, ಯೋಗೇಶ್ವರಿ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಉದಯಶಂಕರ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ್  ಸೇರಿದಂತೆ ಅನೇಕ ಮುಖಂಡರು ಆಗಮಿಸಿದ್ದರು.

Share This Article
Leave a Comment