ಕೊಟ್ಟೂರು : ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಲ್ಲು ಗ್ರಾಮದಲ್ಲಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹ 1.20 ಲಕ್ಷ ರೂ. ಮೌಲ್ಯದ ಎರಡು ಆಕಳುಗಳು ಹಾಗೂ 20 ಸಾವಿರ ರೂ. ನಗದನ್ನು ಜಪ್ತಿ ಮಾಡಲಾಗಿದೆ.
ಕೊಟ್ಟೂರು ತಾಲ್ಲೂಕಿನ ಸುಂಕದಕಲ್ಲು ಗ್ರಾಮದ ಬಂಡ್ರಿ ಅಣ್ಣಪ್ಪ, ಕೆ.ಸುದೀಪ್ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ :
ಸುಂಕದಕಲ್ಲು ಗ್ರಾಮದ ನಿವಾಸಿ ಶ್ರೀ ಆರ್.ಎಂ. ರುದ್ರಯ್ಯ ಎಂಬುವವರ ಕಣದಲ್ಲಿ ಕಟ್ಟಿದ್ದ ಎರಡು ಆಕಳುಗಳನ್ನು ಮಾರ್ಚ್ 12, 2026 ರ ರಾತ್ರಿ 10:30 ರಿಂದ ಮಾರ್ಚ್ 13ರ ಬೆಳಿಗ್ಗೆ 05:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಆರ್.ಎಂ. ರುದ್ರಯ್ಯ ಅವರು ಮಾರ್ಚ್ 13 ರಂದು ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಠಾಣೆಯಲ್ಲಿ ಪ್ರಕರಣ (ಗುನ್ಹೆ ಸಂ. 56/2026) ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಪೊಲೀಸರ ಕಾರ್ಯಾಚರಣೆ:
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಕೊಟ್ಟೂರು ವೃತ್ತದ ಸಿ.ಪಿ.ಐ. ಡಿ. ದುರುಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು. ಕೊಟ್ಟೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ&ಸು) ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿಗಳಾದ ಬಸವರಾಜ ಹೆಚ್. (ಸಿಪಿಸಿ-204), ಶಿಶಧರ (ಸಿಪಿಸಿ-494) ಮತ್ತು ನಾಗಪ್ಪ ಯು. (ಹೆಚ್.ಸಿ 256) ಅವರನ್ನೊಳಗೊಂಡ ತಂಡವು ಜಾನುವಾರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಆರೋಪಿತರನ್ನು ದಸ್ತಗಿರಿ ಮಾಡಿರುವ ಪೊಲೀಸರು, ಅವರಿಂದ ಅಂದಾಜು ₹ 1,20,000 ರೂಪಾಯಿ ಬೆಲೆಬಾಳುವ 2 ಆಕಳು ಮತ್ತು ₹ 20,000 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ ಪತ್ರಿಕಾ ಪ್ರಕಟಣೆ (ದೂರವಾಣಿ: 08394-200202) ತಿಳಿಸಿದೆ.
