ಹರಪನಹಳ್ಳಿ: ಬಿಜೆಪಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಲೋಪವಿಲ್ಲ ಇದರ ಕುರಿತು ಅರಿವು ಮೂಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ ಕರೆ ನೀಡಿದರು.
ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿಬಿ ಜಿ ರಾಮ್ ಜಿ ಜನಜಾಗೃತಿ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ನರೇಗಾ ನಿರಂತರ ಬದಲಾವಣೆ ಆಗಿದೆ. ರಾಮನ ಹೆಸರನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿದೆ ಎಂದರು. ಹರಿಹರ ಶಾಸಕ ಬಿ.ಪಿ ಹರೀಶ್ ಮಾತನಾಡಿ, ‘ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ಷಮತೆಯಿಂದ ದೇಶವನ್ನು ಆರ್ಥಿಕವಾಗಿ ಸಧೃಢದತ್ತ ಒಯ್ಯುತ್ತಿದ್ದಾರೆ ಎಂದು ತಿಳಿಸಿದರು. ಮಾಜಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ‘ರಾಜ್ಯದಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆ ಘೋಷಣೆಯಾಗುವ ವಾತಾವರಣ ದಟ್ಟವಾಗಿದೆ. ಕಾರ್ಯಕರ್ತರು ಒಗ್ಗೂಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ರಾಜ್ಯಾಧ್ಯಕ್ಷ ಜಿ ನಂಜನಗೌಡ ಮಾತನಾಡಿ, ಕೇಂದ್ರದ ಯೋಜನೆ ಅನುಷ್ಠಾನ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ ಅಣ್ಣಪ್ಪ ಮಾತನಾಡಿ, ಬಿಜೆಪಿ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಕಾಂಗ್ರೆಸ್ ಜಾರಿಗೊಳಿಸದೆ ರೈತರ ಜೀವದ ಜೊತೆ ಚೆಲ್ಲಾಟ ಅಡುತ್ತಿದೆ’ ಎಂದು ಆರೋಪಿಸಿದರು.
ಗಾಯತ್ರಿ ಸಿದ್ದೇಶ್ವರ, ಡಾ.ರಮೇಶ್, ಮುತ್ತಿಗೆ ವಾಗೇಶ್, ಕಂಚಿಕೆರೆ ಕೆಂಚಪ್ಪ ಮಾತಾನಾಡಿದರು. ಬಿಜೆಪಿ ರಾಜ್ಯ ಎಸ್.ಟಿ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಣಿವಿಹಳ್ಳಿ, ಮಾಜಿ ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್, ಎಸ್.ಪಿ ನಾಯ್ಕ, ಓಂಕಾರ ಗೌಡ, ಬಂದೋಳ ಮಂಜುನಾಥ್, ಪಾಟೀಲ್ ಕೆಂಚನಗೌಡ, ಮಂಜುನಾಥ್ ಇಜಂತಕರ್, ಸಣ್ಣ ಹಾಲಪ್ಪ, ಕುಸುಮಾ ಜಗದೀಶ್, ಕೆ.ಎಂ ಪ್ರಾಣೇಶ್, ಕೆ.ಮಲ್ಲಿಕಾರ್ಜುನ, ಕೆ.ಲಿಂಗಾನಂದ ಇತರರಿದ್ದರು.
ವಲಸಿಗ ರಾಜಕಾರಣಿಗೆ ಗೋಬ್ಯಾಕ್ ಕಾಲ ಸಮೀಪಿಸುತ್ತಿದೆ
‘ಹರಪನಹಳ್ಳಿಗೆ 2008ರ ವಿಧಾನಸಭಾ ಚುನಾವಣೆಯಲ್ಲಿ ಜಿ.ಕರುಣಾಕರ ರೆಡ್ಡಿಯವರನ್ನು ಬ್ರಿಟಿಷರಂತೆ ಪರಿಚಯಿಸಿ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದು, ಕ್ಷೇತ್ರದ ಬೂತ್ ಮಟ್ಟದ ಜನತೆಯಲ್ಲಿ ಕ್ಷಮೆ ಕೋರುತ್ತೆನೆ ಎಂದು ಹೂವಿನ ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಬೇಸರ ವ್ಯಕ್ತಪಡಿಸಿದರು.
ಈಗ ಅಂತಹವರನ್ನು ಕ್ಷೇತ್ರದಿಂದ ಉಚ್ಛಾಟನೆ ಮಾಡಿ, ಗೋ ಬ್ಯಾಕ್ ಮಾಡುವ ಕಾಲ ಸಮೀಪಿಸುತ್ತಿದೆ. ಎಲ್ಲರೂ ಒಗ್ಗಟ್ಟಾಗಬೇಕು. ಈಗಿರುವ ಶಾಸಕಿ ನಮ್ಮ ಕ್ಷೇತ್ರದ ಮಗಳು ಆಗಿದ್ದಾರೆ, ಅವರನ್ನು ಬೈಯೋದು ಬೇಡ, ಅವರಲ್ಲಿ ಆಂತರಿಕ ಕಲಹದಿಂದ ಸೊರಗಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷವನ್ನು ಬೂತ್ ಮಟ್ಟದಿಂದಲೇ ಸಂಘಟಿಸಲು ಮುಂದಾಗಬೇಕು ಎಂದರು.
