ವಿಜಯನಗರ (ಹೊಸಪೇಟೆ) : ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತ ಮತ್ತು ಹಾವು ಕಡಿತ ನಿರೋಧಕ ಲಸಿಕೆಗಳು ಕಡ್ಡಾಯವಾಗಿ ಲಭ್ಯವಿರಬೇಕು. ಯಾವುದೇ ಕೇಂದ್ರದಲ್ಲಿ ಲಸಿಕೆ ಕೊರತೆಯಾಗಿ ಚಿಕಿತ್ಸೆ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ಆಂಟಿ ರೇಬೀಸ್ ಮತ್ತು ಆಂಟಿ ಸ್ನೇಕ್ ವೆನಮ್ ಲಸಿಕೆಗಳ ಹೆಚ್ಚುವರಿ ದಾಸ್ತಾನಿರಬೇಕು. ನಾಯಿ ಅಥವಾ ಯಾವುದೇ ರೀತಿಯ ಹಾವು ಕಡಿತ ಉಂಟಾದಾಗ ಸಮಯ ವ್ಯರ್ಥ ಮಾಡದೇ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆಯಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಹಾಗೂ ಹಾವು ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ಉಚಿತವಾಗಿ ದೊರೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರು ಮೂಡನಂಬಿಕೆ ಒಳಗಾಗಿ ಯಾವುದೇ ಕಾರಣಕ್ಕೂ ನಾಟಿ ಔಷಧಿಗಳ ಮೊರೆ ಹೋಗಬಾರದು. ಇದರಿಂದ ಸಾವು ಸಂಭವಿಸುವ ಸಂಭವ ಹೆಚ್ಚಿರುತ್ತದೆ. ನಾಗರೀಕರು ಗೋಲ್ಡನ್ ಅವರ್ ಸಮಯದಲ್ಲಿ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಡಿಹೆಚ್ಓ ಡಾ.ಎಲ್.ಆರ್.ಶಂಕರ್ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಔಷಧ ಸಮರ್ಪಕ ದಾಸ್ತಾನಿದ್ದು, ಯಾವುದೇ ಕೊರತೆಯಿಲ್ಲ. ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ 1490, ಹೂವಿನಹಡಗಲಿಯಲ್ಲಿ 662, ಹಗರಿಬೊಮ್ಮನಹಳ್ಳಿಯಲ್ಲಿ 606, ಹರಪನಹಳ್ಳಿಯಲ್ಲಿ 654, ಕೂಡ್ಲಿಗಿಯಲ್ಲಿ 294, ಕೊಟ್ಟೂರಿನಲ್ಲಿ 77 ನಾಯಿ ಕಡಿತ ಪ್ರಕರಣ ಸೇರಿ 3743 ಪ್ರಕರಣ ದಾಖಲಾಗಿವೆ. ಈ ಪೈಕಿ ಹರಪನಹಳ್ಳಿ ಮತ್ತು ಹೊಸಪೇಟೆ ತಾಲ್ಲೂಕಿನಲ್ಲಿ ತಲಾ 2 ರಂತೆ ರೇಬಿಸ್ ಖಾಯಿಲೆಗೆ ಬಲಿಯಾಗಿದ್ದಾರೆ. ಅದರಂತೆ ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಹೊಸಪೇಟೆಯಲ್ಲಿ 22, ಹಡಗಲಿ 16, ಹಗರಿಬೊಮ್ಮನಹಳ್ಳಿ 26, ಕೂಡ್ಲಿಗಿ 14, ಕೊಟ್ಟೂರು 04, ಹರಪನಹಳ್ಳಿ ತಾಲ್ಲೂಕಿನಲ್ಲಿ 17 ಸೇರಿ ಒಟ್ಟು 99 ಹಾವು ಕಡಿತ ಪ್ರಕರಣ ದಾಖಲಾಗಿವೆ. ಅದರಲ್ಲಿ ಚಿಕಿತ್ಸೆ ಫಲಿಸದೇ 7 ಜನ ಮೃತಪಟ್ಟಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಯ್ ಮಹ್ಮದ್ ಅಲಿ ಅಕ್ರಂ ಷಾ, ಡಿ.ಹೆಚ್.ಓ ಡಾ.ಎಲ್.ಆರ್.ಶಂಕರ್ ನಾಯ್ಕ್, ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಪಶುಸಂಗೋಪನೆ ಇಲಾಖೆ ಅಧಿಕಾರಿ ರವಿ ಜಿಲ್ಲಾ ಅನುಷ್ಠಾನಾಧಿಕಾರಿ ಷಣ್ಮುಖ ನಾಯ್ಕ ಹಾಗೂ ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
Leave a comment