ಹರಪನಹಳ್ಳಿ : ಕಬ್ಬು ತುಂಬಿದ್ದ ಲಾರಿಯು ಚಾಲಕನ ಅಜಾಗರೂಕತೆಯಿಂದ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಗೋಡೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಅರಸೀಕೆರೆಗೆ ಹೋಗುವ ಬೈಪಾಸ್ ರಸ್ತೆಯಲ್ಲಿರುವ ಸಾಲೇಹಾ ಅವರ ಮನೆಗೆ ಕೆಎ 19, ಬಿ 7679 ನಂಬರಿನ ಲಾರಿಯು ಡಿಕ್ಕಿಯಾಗಿ ಗೋಡೆಗೆ ಹಾನಿಯಾಗಿದೆ. ಲಾರಿಚಾಲಕ ತಲೆಮರೆಸಿಕೊಂಡಿದ್ದಾನೆ.
ನಿತ್ಯ ಹೊರಗಡೆ ಕುಳಿತು ಕೊಳ್ಳುತ್ತಿದ್ದ ಮನೆಯವರು ಗುರುವಾರ ಊಟದ ಸಮಯವಾಗಿದ್ದರಿಂದ ಮನೆ ಒಳಗಡೆ ಎಂಟು ಜನರಿದ್ದರು. ಏಕಾಏಕಿ ಲಾರಿಯು ಮನೆಗೆ ಡಿಕ್ಕಿ ಹೊಡೆದು ನಿಂತುಕೊಂಡಿತು ಎಂದು ತಿಳಿಸಿದ್ದಾರೆ.
ದೌಡಾಯಿಸಿದ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಕಬ್ಬು ತುಂಬಿಕೊಂಡು ಬರುವ ಲಾರಿಗಳನ್ನು ಚಾಲಕರು ನಗರದ ರಸ್ತೆಗಳಲ್ಲಿ ನಿರ್ಲಕ್ಷ್ಯದಿಂದ ಚಲಾಯಿಸುತ್ತಾರೆ. ಹಾನಿಯಾಗಿರುವ ಮನೆಯ ಮಾಲೀಕರಿಗೆ ಪರಿಹಾರ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ ಐ ಶಂಭುಲಿಂಗ ಹಿರೇಮಠ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
