ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ನಿವೃತ್ತ ಶಿಕ್ಷಕನಿಗೆ ಬೀಳ್ಕೊಡುಗೆ

Sirisuddi Kannada
2 Min Read

ಹರಪನಹಳ್ಳಿ: “ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ, ಅವರು ಸಮಾಜದ ಶಿಲ್ಪಿಗಳು. ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರನ್ನು ಗೌರವಿಸಿದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ,” ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೈ. ಹೆಚ್. ಚಂದ್ರಶೇಖರ್ ತಿಳಿಸಿದರು.

ತಾಲ್ಲೂಕಿನ ಗುಂಡಗತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಹೆಚ್. ಕೊಟ್ರಪ್ಪ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ನಾನು 1994ರಲ್ಲಿ ಇದೇ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಗ ಕೊಟ್ರಪ್ಪ ಸರ್ ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದರು. ಅವರು ಅಂದೇ ನಮಗೆ ಕೋಮು ಸೌಹಾರ್ದತೆಯ ಬಗ್ಗೆ ತಿಳಿಸಿಕೊಟ್ಟಿದ್ದರು. ಅವರ ಕೈ ಕೆಳಗೆ ಓದಿ ಇಂದು ನಾನು ಜವಾಬ್ದಾರಿಯುತ ಹುದ್ದೆಯಲ್ಲಿದ್ದೇನೆ ಎನ್ನಲು ಹೆಮ್ಮೆಯಾಗುತ್ತದೆ,” ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ್ ತಮ್ಮ ಹಳೆಯ ನೆನಪು ಮೆಲುಕು ಹಾಕಿದರು.

7 ಸಾವಿರ ಶಿಷ್ಯರು ಸರ್ಕಾರಿ ನೌಕರಿಯಲ್ಲಿರುವುದು ನನ್ನ ಸೌಭಾಗ್ಯ: ಕೊಟ್ರಪ್ಪ

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಚ್. ಕೊಟ್ರಪ್ಪ ಅವರು, “ನಾನು ಇದೇ ಶಾಲೆಯಲ್ಲಿ ಓದಿ, ಇಲ್ಲೇ ಶಿಕ್ಷಕನಾಗಿ ಕೆಲಸ ಮಾಡಿ ಇಂದು ನಿವೃತ್ತಿ ಹೊಂದುತ್ತಿರುವುದು ಪೂರ್ವ ಜನ್ಮದ ಪುಣ್ಯ. ನನ್ನ ಬಳಿ ಅಕ್ಷರ ಕಲಿತ 10 ಸಾವಿರ ವಿದ್ಯಾರ್ಥಿಗಳಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಇಂದು ಡಾಕ್ಟರ್, ಇಂಜಿನಿಯರ್ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಡುತ್ತೇನೆ,” ಎಂದು ಭಾವುಕರಾದರು.

ಬೆಳ್ಳಿ ರಥದಲ್ಲಿ ಗುರುವಿನ ಮೆರವಣಿಗೆ!

ಸುದೀರ್ಘ 31 ವರ್ಷಗಳ ಕಾಲ ಶಿಕ್ಷಣ ಸೇವೆಯಲ್ಲಿ ತೊಡಗಿದ್ದ ಕೊಟ್ರಪ್ಪ ಅವರ ಸೇವೆಯನ್ನು ಸ್ಮರಿಸಿದ ಗ್ರಾಮಸ್ಥರು ಹಾಗೂ ಶಿಷ್ಯ ಬಳಗ, ಅವರನ್ನು ಮತ್ತು ಅವರ ಕುಟುಂಬದವರನ್ನು ಬೆಳ್ಳಿಯ ರಥದಲ್ಲಿ ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ರಾಜಮರ್ಯಾದೆ ನೀಡಿದರು. ಇಡೀ ಗ್ರಾಮವೇ ಹಬ್ಬದ ವಾತಾವರಣದಲ್ಲಿ ಮಿಂದು ಹೋದಂತಿತ್ತು.

ಪ್ರಮುಖಾಂಶಗಳು:

* ಗೌರವ ಸನ್ಮಾನ: ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಇಂದ್ರಮ್ಮ ಅವರನ್ನು ಸಹ ಗೌರವಿಸಲಾಯಿತು.

 * ಗಣ್ಯರ ಉಪಸ್ಥಿತಿ: ವಕೀಲರಾದ ಹೆಚ್.ಕೆ. ಹಾಲೇಶ್,  ಬಸವರಾಜ ಸಂಗಪ್ಪನವರ್, ಎಂ.ವಿ. ಅಂಜಿನಪ್ಪ, ಕೆ. ನೇತ್ರಾವತಿ, ಪಿಡಿಒ ಶಾಂತಕುಮಾರು ಹಾಗೂ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಪ್ರಭು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share This Article
Leave a Comment