ಕನ್ನಡವೆಂದರೆ ಸಮಾನತೆ ಜಾತ್ಯಾತೀತತೆ

Sirisuddi Kannada
3 Min Read

ವಿಜಯನಗರ (ಹೊಸಪೇಟೆ): ಕನ್ನಡ ಕೇವಲ ಒಂದು ಭಾಷೆಯಲ್ಲ. ಎಲ್ಲಾ ಜಾತಿ, ಧರ್ಮಗಳ ಸಾಹಿತಿಗಳು ಭಾಷೆಯನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದಾರೆ. ಕನ್ನಡವೆಂದರೆ ಸೌಹಾರ್ದತೆ, ಸಮಾನತೆ ಮತ್ತು ಜಾತ್ಯಾತೀತೆ ಪ್ರತೀಕವಾಗಿ ಎಲ್ಲಾ ಜಾತಿ ಧರ್ಮಗಳನ್ನು ಮೀರಿದ ಭಾಷೆಯಾಗಿದೆ ಎಂದು ಹಿರಿಯ ವಿದ್ವಾಂಸರು ಹಾಗೂ ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ವಿಶ್ವವಿದ್ಯಾಲಯ ನುಡಿಹಬ್ಬ-34 ರ ಪ್ರಯುಕ್ತ ಪ್ರಸಾರಾಂಗ ವಿಭಾಗದಿಂದ ಮಂಗಳವಾರ ಮಂಟಪ ಸಭಾಂಗಣದಲ್ಲಿ 42 ಪುಸ್ತಕಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡವನ್ನು ಕೇಂದ್ರವನ್ನಾಗಿಟ್ಟುಕೊಂಡಿರುವ ಮತ್ತು ಸಂಶೋಧನೆಯನ್ನೇ ಜೀವಾಳವಾಗಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸಮರ್ಪಕವಾಗಿ ಅನುದಾನ ಲಭ್ಯವಾಗುತ್ತಿಲ್ಲ. ಅನುದಾನ ಒದಗಿಸುವ ಮೂಲಕ ಹೆಚ್ಚು ಬೆಂಬಲ ಒದಗಿಸಬೇಕಿದೆ ಎಂದ ಅವರು. ಬಂದೇ ನವಾಜ್‌ರವರಿಗೆ ಸಿದ್ದಯ್ಯ ಸ್ವಾಮಿ, ಗೋವಿಂದ ಭಟ್ಟರಿಗೆ ಶಿಶುನಾಳ ಶರೀಫರು ಶಿಶ್ಯರಾಗಿರುವ ಮುಖೇನ ಜಾತ್ಯತೀತವಾಗಿ ಉಳಿದಿತ್ತು. ಆದರೆ ಇಂದು ಜಾತಿ, ಧರ್ಮದ ಕಾರಣಕ್ಕಾಗಿ ದ್ವೇಷದ ದೀಪಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಜನ ಸಾಮಾನ್ಯರಿಗೆ ಕನ್ನಡ ಕಟ್ಟುವಿಕೆಯಲ್ಲಿಯೇ ಜಾತ್ಯಾತೀತತೆ, ಸೌಹಾರ್ದತೆ ಎಂಬುದನ್ನು ತಿಳಿಸಿಬೇಕಿದೆ ಎಂದರು.
ಶೇ.5ರಷ್ಟು ಮಾನವಿಕ ಜ್ಞಾನ ಶಿಸ್ತು ಅಧ್ಯಯನ:
ಬ್ಯುಸಿನೆಸ್ ಇವೆಂಟ್ ಬಗ್ಗೆ ಶೇ.60 ರಷ್ಟು, ವಾಸ್ತುಶಿಲ್ಪ ಬಗ್ಗೆ ಶೇ.15, ಫ್ಯಾಷನ್ ಡಿಸೈನ್ ಕುರಿತು ಶೇ.10 ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಶೇ.10 ರಷ್ಟು ಅಧ್ಯಯನ ಮಾಡಲಾಗುತ್ತಿದೆ. ಆದರೆ ಮಾನವಿಕ (ರಾಜಕೀಯ, ಸಾಮಾಜಿಕ, ಸಾಹಿತ್ಯ, ಅರ್ಥಶಾಸ್ತç ಮುಂತಾದವು) ಜ್ಞಾನಶಿಸ್ತು ಅಧ್ಯಯನದ ಕುರಿತು ಕೇವಲ ಶೇ.5 ರಷ್ಟು ಮಾತ್ರ ಅಧ್ಯಯನ, ಸಂಶೋಧನೆಗಳು ನಡೆಸಲಾಗುತ್ತಿದೆ. ಇವುಗಳನ್ನು ಉಳಿಸಿ, ಬೆಳೆಸುವುದು ಬಹುದೊಟ್ಟ ಸವಲಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇತಿಹಾಸ, ರಾಜ್ಯಶಾಸ್ತç, ಅರ್ಥಶಾಸ್ತç ಅಧ್ಯಯನ ಮಾಡಿದರೆಲ್ಲರಿಗೂ ಆಯಾ ವಿಷಯದ ಬಗ್ಗೆ ಒಂದಷ್ಟು ಪರಿಣಿತಿ ಹೊಂದಿರುತ್ತಾರೆ. ಆದರೆ ಸಾಹಿತಿಯಾದವರಿಗೆ ಈ ಎಲ್ಲಾ ವಸ್ತುಸ್ಥಿತಿ, ಜ್ಞಾನದ ಸಂವೇದನಾಶೀಲತೆ ಬಗ್ಗೆ ಅರಿವಿರಬೇಕು. ಆಗ ಮಾತ್ರ ಉತ್ತಮ ಸಾಹಿತಿಯಾಗಲು ಸಾಧ್ಯ ಎಂದರು.
ಬದುಕನ್ನು ಅರ್ಥೈಸಿಕೊಳ್ಳಲು ಮಾನವಿಕ ಜ್ಞಾನ ಅಗತ್ಯ:
ಪ್ರಸ್ತುತ ಆಧುನಿಕ ತಂತ್ರಜ್ಞಾನದ ಹಾವಳಿ ಹೆಚ್ಚಾಗಿದೆ. ಈ ತಂತ್ರಜ್ಞಾನ ಜ್ಞಾನವಾಗಿ ಉಳಿಯದೇ, ಒಂದು ಉದ್ಯಮವಾಗಿ ಉಳಿದುಕೊಂಡಿದೆ. ನವ ನವೀನ ತಂತ್ರಜ್ಞಾನಗಳ ಆವಿಷ್ಕಾರದಿಂದಾಗಿ ಆಧುನಿಕ ತಂತ್ರಜ್ಞಾನ ಮೇಲುಗೈ ಸಾಧಿಸಿ, ವಿಜ್ಞಾನ ಕೂಡ ಹಿನ್ನೆಲೆಗೆ ಸರಿದಿರುವುದು ದುರಂತವೇ ಸರಿ. ಹಾಗಂತ ತಂತ್ರಜ್ಞಾನವನ್ನು ನಿರಾಕರಿಸಬೇಕಿಲ್ಲ. ಆದರೆ ಅವುಗಳ ಬಳಕೆ ಕುರಿತು ವಿವೇಚನೆ ಮತ್ತು ಔಚಿತ್ಯ ಬೆಳೆಸಿಕೊಳ್ಳಬೇಕು. ಈ ತಂತ್ರಜ್ಞಾನಕ್ಕೂ ಜ್ಞಾನ ತುಂಬಿದ್ದು ಮನುಷ್ಯ. ಅಂತಹ ಮಾನವಿಕ ಜ್ಞಾನವುಳ್ಳ ಮನುಷ್ಯನಿಗೆ ಹಾಗೂ ಮಾನವಿಕ ಜ್ಞಾನಶಿಸ್ತಿಗೆ ಮೊದಲ ಆದ್ಯತೆ ನೀಡಬೇಕು. ಇತ್ತೀಚೆಗೆ ಕೃತಕಬುದ್ದಿ ಮತ್ತೆ (ಆರ್ಟಿಫಿಸಿಯಲ್ ಇಂಟಲಿಜೆನ್ಸ್) ಅತೀ ಹೆಚ್ಚು ಪ್ರಚಲಿತದಲ್ಲಿದ್ದು, ಜಗತ್ತಿನಲ್ಲಿ ಇವುಗಳಿಗೆ ಸಿಕ್ಕಷ್ಟು ಪ್ರಚಾರ, ಈ ದೇಶದ ಸಮಾನತೆ, ಸೌಹಾರ್ದತೆ ಪ್ರತಿನಿಧಿಸುವ ಬೃಹತ್ ಕೃತಿಗೆ ಸಿಗುತ್ತಿಲ್ಲ ಎಂದರು.
ಪುಸ್ತಕಗಳ ಓದಿನ ಪ್ರವೇಶ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬೇಕು, ಆದರೆ ದ್ವೇಷಗಳಿರಬಾರದು. ಬೌದ್ಧಿಕ ವಿಭಜಕ ಪ್ರವೃತ್ತಿಗಳಿರಬಾರದು. ಲೇಖಕರಾದ ಪ್ರತಿಯೊಬ್ಬರೂ ಜನರಿಗೆ ಸತ್ಯವನ್ನು ಹೇಳುವ ಮರ್ಯಾದಸ್ಥ ಮನುಷ್ಯರಾಗೋಣ ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಪ್ರಸಾರಾಂಗವು 42 ಪುಸ್ತಕಗಳು ಸೇರಿ ಇದುವರೆಗೂ ಒಟ್ಟು 1,753 ಪುಸ್ತಕ ಪ್ರಕಟಿಸಿದೆ. ಮನುಷ್ಯನ ಬೌದ್ಧಿಕ ಜ್ಞಾನದ ಚಟುವಟಿಕೆಯ ಸಂಕೇತವಾಗಿವೆ. ಇತಿಹಾಸ, ಶಾಸನ, ಜಾನಪದ, ಸಂಸ್ಕೃತಿ ವಿಷಯಗಳ ಪುಸ್ತಕಗಳಿಂದ ಹಿಡಿದು ಎ.ಐ. ತಂತ್ರಜ್ಞಾನದವರೆಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರಕಟಿಸಿರುವುದು ಹೆಗ್ಗಳಿಕೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರ ಅವರಿಗೆ ಸನ್ಮಾನಿಸಲಾಯಿತು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
Leave a Comment